

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷ ತನ್ನದೇ ಕಾರ್ಪೋರೇಟರ್ ಅನ್ನು ಪಕ್ಷವಿರೋಧಿ ಚುಟುವಟಿಕೆ ಆರೋಪದಡಿ ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಮಹಾರಾಷ್ಟ್ರದ ಅಮರಾವತಿ ನಗರ ಪಾಲಿಕೆಯ ಮೇಯರ್ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ ನಂತರ ಎಐಎಂಐಎಂ ಕಾರ್ಪೊರೇಟರ್ ಮೀರಾ ಕಾಂಬ್ಳೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಎಐಎಂಐಎಂ ನಾಯಕಿ ಇಮ್ತಿಯಾಜ್ ಜಲೀಲ್, 'ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದಿದ್ದ ಪಕ್ಷವು ಶುಕ್ರವಾರ ನಡೆದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯ ಸಮಯದಲ್ಲಿ ತಟಸ್ಥವಾಗಿರಲು ನಿರ್ಧರಿಸಿತ್ತು.
ಆದಾಗ್ಯೂ, ಮೀರಾ ಕಾಂಬ್ಳೆ ಅವರು ಪಕ್ಷದ ನಿಲುವನ್ನು ನಿರ್ಲಕ್ಷಿಸಿ ಬಿಜೆಪಿ ಮೇಯರ್ ಅಭ್ಯರ್ಥಿ ಶ್ರೀಚಂದ್ ತೇಜ್ವಾನಿ ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳಿದ್ದಾರೆ.
ಉಚ್ಛಾಟನೆ ಮಾತ್ರವಲ್ಲ ಅನರ್ಹತೆ ತೂಗುಗತ್ತಿ
ಇನ್ನು ಇದೇ ವೇಳೆ ಮೀರಾ ಕಾಂಬ್ಳೆ ಅವರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಕೂಡ ಪಕ್ಷ ಪ್ರಾರಂಭಿಸಿದೆ ಎಂದು ಜಲೀಲ್ ಹೇಳಿದರು. ಈ ಸಂಬಂಧ ಅಮರಾವತಿಯ ಪಕ್ಷದ ಅಧಿಕಾರಿಗಳು ಮತ್ತು ನಾಯಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
87 ಸದಸ್ಯ ಬಲದ ಅಮರಾವತಿ ನಗರಸಭೆಯ ಮೇಯರ್ ಮತ್ತು ಉಪಮೇಯರ್ ಆಗಿ ರವಿ ರಾಣಾ ಅವರ ಯುವ ಸ್ವಾಭಿಮಾನ್ ಪಕ್ಷದ ಬಿಜೆಪಿಯ ಶ್ರೀಚಂದ್ ತೇಜ್ವಾನಿ ಮತ್ತು ಸಚಿನ್ ಓಂಕಾರರಾವ್ ಭೇಂಡೆ ಆಯ್ಕೆಯಾದರು.
ಮಹಾಯುತಿ ಮೈತ್ರಿಕೂಟದಲ್ಲಿ, ಬಿಜೆಪಿ 25 ಕಾರ್ಪೊರೇಟರ್ಗಳನ್ನು ಹೊಂದಿದ್ದರೆ, ವೈಎಸ್ಪಿ 15 ಸದಸ್ಯರನ್ನು ನಾಗರಿಕ ಸಂಸ್ಥೆಯಲ್ಲಿ ಹೊಂದಿದೆ.
Advertisement