

ನಾಗೌರ್: ರಾಜಸ್ಥಾನದ ನಾಗೌರ್ನ ದೇಗಾನಾದ ಚಿನ್ನದ ಮಾರುಕಟ್ಟೆಯಲ್ಲಿರುವ ಆಭರಣ ಅಂಗಡಿಯಿಂದ ಪಾರಿವಾಳದೊಂದು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಚ್ಚಿ ಪರಾರಿಯಾದ ಘಟನೆ ನಡೆದಿದೆ.
ದೇಗಾನಾ ಬುಲಿಯನ್ ಮಾರ್ಕೆಟ್ನಲ್ಲಿರುವ ಚಿನ್ನಾಭರಣ ಮಳಿಗೆಯೊಂದರ ಮೇಲಿನ ಮಹಡಿಯಲ್ಲಿ ಕುಶಲಕರ್ಮಿಗಳು ಚಿನ್ನದ ಆಭರಣಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಅಂಗಡಿಯೊಳಗೆ ನುಗ್ಗಿದ ಪಾರಿವಾಳವೊಂದು, ಅಲ್ಲಿಯೇ ಇದ್ದ ಹೊಸದಾಗಿ ವಿನ್ಯಾಸಗೊಳಿಸಲಾದ ಚಿನ್ನದ ಸರವನ್ನು ತನ್ನ ಕೊಕ್ಕಿನಿಂದ ಕಚ್ಚಿಕೊಂಡು ಕ್ಷಣಾರ್ಧದಲ್ಲಿ ಹಾರಿಹೋಗಿದೆ.
ನಾವು ಪಾರಿವಾಳವನ್ನು ಹಿಂಬಾಲಿಸಿದೆವು, ಅದು ಮಾರುಕಟ್ಟೆಯ ಛಾವಣಿಯ ಮೇಲೆ ಇಳಿದು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಕುಳಿತಿತ್ತು. ಹಕ್ಕಿ ಅದರ ಕುತ್ತಿಗೆಯನ್ನು ಅಲ್ಲಾಡಿಸಿತು, ಚಿನ್ನದ ಸರ ಅದರ ಕುತ್ತಿಗೆಗೆ ಸುತ್ತಿಕೊಂಡಿತು ಎಂದು ಅಂಗಡಿಯವರು ಹೇಳಿದರು.
ಬೆಲೆಬಾಳುವ ಆಭರಣದೊಂದಿಗೆ ಹಕ್ಕಿ ಹಾರುವುದನ್ನು ಕಂಡ ಮಾಲೀಕರು ಮತ್ತು ಕೆಲಸಗಾರರು ಒಂದು ಕ್ಷಣ ಸ್ತಬ್ದರಾದರು. ಈ ಸುದ್ದಿ ಇಡೀ ಮಾರುಕಟ್ಟೆಯಲ್ಲಿ ಹರಡಿತು.
ಹಲವು ನಿಮಿಷಗಳ ಹೈಡ್ರಾಮಾ
ಅಂಗಡಿಯಿಂದ ಹೊರಹಾರಿ ಹೋದ ಪಾರಿವಾಳವು ಮಾರುಕಟ್ಟೆಯ ಕಟ್ಟಡದ ಮೇಲ್ಛಾವಣಿಯ ಮೇಲೆ ಹೋಗಿ ಕುಳಿತುಕೊಂಡಿತು. ಅಲ್ಲಿ ಸೇರಿದ್ದ ಜನರು ಮತ್ತು ವ್ಯಾಪಾರಿಗಳು ಸರವು ಎಲ್ಲಿಯಾದರೂ ಬಿದ್ದು ಹೋಗಬಹುದೇ ಅಥವಾ ಪಾರಿವಾಳ ದೂರ ಹಾರಿ ಹೋಗಬಹುದೇ ಎಂಬ ಆತಂಕದಿಂದ ಆ ಹಕ್ಕಿಯ ಚಲನವಲನವನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಅದೃಷ್ಟವಶಾತ್, ಕೆಲವು ನಿಮಿಷಗಳ ನಂತರ ಪಾರಿವಾಳದ ಕೊಕ್ಕಿನಿಂದ ಚಿನ್ನದ ಸರವು ಜಾರಿ ಛಾವಣಿಯ ಮೇಲೆ ಬಿತ್ತು. ಕೂಡಲೇ ಅಂಗಡಿಯ ಸಿಬ್ಬಂದಿ ಅಲ್ಲಿಗೆ ಧಾವಿಸಿ ಆಭರಣವನ್ನು ಸುರಕ್ಷಿತವಾಗಿ ಪಡೆದುಕೊಂಡರು.
Advertisement