ಸಂಜಯ್ ಕಪೂರ್ ಆಸ್ತಿ ವಿವಾದ: 'ಕೊಳಕು ಬಟ್ಟೆಗಳನ್ನು ಸಾರ್ವಜನಿಕವಾಗಿ ತೊಳೆಯಬೇಡಿ'; ದೆಹಲಿ ಹೈಕೋರ್ಟ್
ನವದೆಹಲಿ: ಉದ್ಯಮಿ ದಿವಂಗತ ಸಂಜಯ್ ಕಪೂರ್ ಅವರ ₹30,000 ಕೋಟಿ ಮೌಲ್ಯದ ಆಸ್ತಿ ವ್ಯಾಜ್ಯ ದಿನಕ್ಕೊಂದು ತಿರುವು ಪಡೆದುಕೊಂಡಿದ್ದು ಕಪೂರ್ ಕುಟುಂಬಕ್ಕೆ ಸೇರಿದ ಆರ್ಕೆ ಫ್ಯಾಮಿಲಿ ಟ್ರಸ್ಟ್ ರದ್ದುಗೊಳಿಸುವಂತೆ ಕೋರಿ ಸಂಜಯ್ ಅವರ ತಾಯಿ ದೆಹಲಿ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ.
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ "ಕೊಳಕು ಬಟ್ಟೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ತೊಳೆಯಬೇಡಿ" ಮಧ್ಯಸ್ಥಿಕೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕೆಂದು ಪರಿಗಣಿಸುವಂತೆ ಎಲ್ಲರಿಗೂ ತಿಳಿಸಿದೆ.
ಇದನ್ನು "ತುಂಬಾ ವಿಷಾದಕರ ಸ್ಥಿತಿ" ಎಂದು ಕರೆದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ, ಮಂಗಳವಾರ ಕಪೂರ್ ಅವರ ತಾಯಿ ರಾಣಿ ಕಪೂರ್ ಅವರು ಕುಟುಂಬ ಟ್ರಸ್ಟ್ ವಿಸರ್ಜಿಸುವಂತೆ ಸಲ್ಲಿಸಿದ ಅರ್ಜಿಯನ್ನು ಆಲಿಸುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರು ನ್ಯಾಯಾಲಯದ ವಿಚಾರಣೆಗಳ ಹಿನ್ನೆಲೆಯಲ್ಲಿ ಈ ಅಭಿಪ್ರಾಯವನ್ನು ನೀಡಲಾಗಿದೆ. ನಟಿ ಕರಿಷ್ಮಾ ಕಪೂರ್ ಅವರೊಂದಿಗೆ ಸಂಜಯ್ ಅವರ ಇಬ್ಬರು ಮಕ್ಕಳು ಅವರ ಉದ್ದೇಶಿತ ವಿಲ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಟ್ರಸ್ಟ್ ಅನ್ನು ಮೋಸದಿಂದ ರಚಿಸಲಾಗಿದ್ದು, ಸೋನಾ ಗ್ರೂಪ್ ಕಂಪನಿಗಳ ಮೇಲಿನ ನಿಯಂತ್ರಣ ಸೇರಿ ತಮ್ಮ ಸಂಪೂರ್ಣ ಆಸ್ತಿಯನ್ನು ಕಸಿದುಕೊಳ್ಳಲು ಅದನ್ನು ಬಳಸಲಾಗಿದೆ. ಸಂಜಯ್ ಕಪೂರ್ ಅವರ ಪತ್ನಿ ಪ್ರಿಯಾ ಕಪೂರ್ ಸಂಚಿನ ಮುಖ್ಯ ಸೂತ್ರಧಾರಿ ಎಂದು 80 ವರ್ಷದ ರಾಣಿ ಕಪೂರ್ ಅವರು ದೂರಿದ್ದಾರೆ.
ಸಂಜಯ್ ಕಪೂರ್ ಅವರ ಮರಣದ ನಂತರ ಪ್ರಿಯಾ ಕಪೂರ್ ಅವರು ತನಗೆ ತಿಳಿಸದೆಯೇ ಸೋನಾ ಗ್ರೂಪ್ನ ಪ್ರಮುಖ ಕಂಪನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತರಾತುರಿಯಲ್ಲಿ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಾನು 2017ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ತನ್ನ ದೈಹಿಕ ಅವಲಂಬನೆ ಮತ್ತು ವಿಶ್ವಾಸವನ್ನೇ ದುರುಪಯೋಗಪಡಿಸಿಕೊಂಡು ಈಗ ನಿಧನರಾಗಿರುವ ಪುತ್ರ ಸಂಜಯ್ ಕಪೂರ್ ಮತ್ತು ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಕುಟಿಲ ಯೋಜನೆ ರೂಪಿಸಿದ್ದರು. ತಮ್ಮ ಮಾಹಿತಿಯುಕ್ತ ಸಮ್ಮತಿ ಇಲ್ಲದೆ ತಮ್ಮ ಎಲ್ಲಾ ಆಸ್ತಿಗಳನ್ನು ಆರ್ಕೆ ಫ್ಯಾಮಿಲಿ ಟ್ರಸ್ಟ್ಗೆ ವರ್ಗಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ವಿಷಯದಲ್ಲಿ ಎಲ್ಲಾ ಪಕ್ಷಗಳು "ದೊಡ್ಡ ನಷ್ಟವನ್ನು ಅನುಭವಿಸಿವೆ" ಎಂದು ನ್ಯಾಯಾಧೀಶರು ಹೇಳಿದರು. "ದೇವರು ನಿಮಗೆ ಗಣನೀಯ ಆರ್ಥಿಕ ಸಂಪತ್ತನ್ನು ನೀಡಿದ್ದಾನೆ, ಅದನ್ನು ಎಲ್ಲರೂ ಉತ್ತಮ ರೀತಿಯಲ್ಲಿ ಅನುಭವಿಸಬೇಕು.
"ದೇವರ ಆಶೀರ್ವಾದವನ್ನು ಶಾಪವಾಗಿ ಪರಿವರ್ತಿಸಬಾರದು" ಎಂದು ನ್ಯಾಯಾಧೀಶರು ಹೇಳಿದರು. ಎಲ್ಲಾ ಕಡೆಯ ವಕೀಲರು ತಮ್ಮ ಕಕ್ಷಿದಾರರೊಂದಿಗೆ ಮಾತನಾಡಲು ಮತ್ತು ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಳ್ಳುವಂತೆ ನ್ಯಾಯಾಧೀಶರು ಸೂಚಿಸಿದರು.

