

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವು 'ಸುಳ್ಳುಗಳಿಂದ ತುಂಬಿದೆ' ಮತ್ತು ಆಡಳಿತಾರೂಢ ಮೈತ್ರಿಕೂಟವು ಅವರು ಹೇಳಿದ 'ಸುಳ್ಳುಗಳನ್ನು' ಸದನದ ದಾಖಲೆಗಳಿಂದ ತೆಗೆದುಹಾಕಲು ಪ್ರಯತ್ನಿಸುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಆರೋಪಿಸಿದ್ದಾರೆ.
ಕೇಂದ್ರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಭಾಷಣ ಮಾಡಿದ ನಂತರ, ಆಡಳಿತಾರೂಢ ಮೈತ್ರಿಕೂಟವು ವಿರೋಧ ಪಕ್ಷದ ನಾಯಕರ ಹೇಳಿಕೆಗಳ ಪರಿಶೀಲನೆಗಾಗಿ ಸ್ಪೀಕರ್ಗೆ ಔಪಚಾರಿಕವಾಗಿ ನೋಟಿಸ್ ಸಲ್ಲಿಸಲಿದೆ ಎಂದು ಕಿರಣ್ ರಿಜಿಜು ಹೇಳಿದರು.
'ರಾಹುಲ್ ಗಾಂಧಿ ಹೇಳಿರುವ ಸುಳ್ಳುಗಳನ್ನು ಸದನದ ದಾಖಲೆಗಳಿಂದ ಅಳಿಸಿಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ. ರಾಹುಲ್ ಗಾಂಧಿ ತಾವು ಹೇಳಿರುವುದನ್ನು ದೃಢೀಕರಿಸುವುದಾಗಿ ಭರವಸೆ ನೀಡಿದ್ದರೂ, 'ಅವರು ಸುಳ್ಳು ಹೇಳಿದ್ದರಿಂದ ಅವುಗಳನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಅವರು ಸದನದಲ್ಲಿ ಸುಳ್ಳು ಹೇಳಿದ್ದಾರೆ' ಎಂದು ಸಚಿವರು ಹೇಳಿದರು.
'ಕಾಂಗ್ರೆಸ್ ನಾಯಕರು ಆಗಾಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿ ನಂತರ ಸಂಬಂಧಪಟ್ಟ ಸಚಿವರ ಉತ್ತರ ಕೇಳಲು ಕುಳಿತುಕೊಳ್ಳುವ ಬದಲು ಸದನದಿಂದ ಹೊರಹೋಗುತ್ತಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸರಿಹೊಂದುವ ಗಂಭೀರ ಜವಾಬ್ದಾರಿಯುತ ವ್ಯಕ್ತಿ ದೇಶದಲ್ಲಿ ಇಲ್ಲದಿರುವುದು ದುರದೃಷ್ಟಕರ' ಎಂದು ಅವರು ವಿಷಾದ ವ್ಯಕ್ತಪಡಿಸಿದರು.
'ರಾಹುಲ್ ಗಾಂಧಿಯವರ 'ಸುಳ್ಳುಗಳಿಗೆ' ತಮ್ಮ ಪಕ್ಷವು ಸಂಸತ್ತಿನ ಹೊರಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸುತ್ತದೆ. ಆದರೆ, ಸದನದ ಒಳಗೆ ನೋಟಿಸ್ ನೀಡುವ ಮೂಲಕ ಔಪಚಾರಿಕ ಕ್ರಮ ಕೈಗೊಳ್ಳುತ್ತದೆ. ರಾಹುಲ್ ಗಾಂಧಿ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧ ನೋಟಿಸ್ ನೀಡದೆಯೇ ಗಂಭೀರ ಆರೋಪ ಮಾಡಿದ್ದಾರೆ. ಇದು ಸಂಸದೀಯ ಹಕ್ಕುಗಳ ಉಲ್ಲಂಘನೆಯಾಗಿದೆ' ಎಂದು ಬಣ್ಣಿಸಿದ್ದಾರೆ.
'ಈ ವಿಷಯದ ಬಗ್ಗೆ ನಾವು ಸ್ಪೀಕರ್ಗೆ ಔಪಚಾರಿಕ ನೋಟಿಸ್ ಸಲ್ಲಿಸುತ್ತೇವೆ. ವಿರೋಧ ಪಕ್ಷದ ನಾಯಕರು ಬಜೆಟ್ ಮೇಲಿನ ಚರ್ಚೆಗೆ ಯಾವುದೇ ಅರ್ಥಪೂರ್ಣ ಕೊಡುಗೆ ನೀಡಿಲ್ಲ. ಬದಲಿಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಚರ್ಚೆಗೆ ಉತ್ತರಿಸುವಾಗ ರಾಹುಲ್ ಗಾಂಧಿಯವರಿಗೆ ಸದನದಲ್ಲಿ ಹಾಜರಿರುವಂತೆ ತಿಳಿಸಲಾಯಿತು. ಆದರೆ, ಅವರು ತಮ್ಮ ಭಾಷಣ ಮುಗಿದ ತಕ್ಷಣ ಸದನದಿಂದ ಹೊರಹೋದರು. ನಿಯಮವೆಂದರೆ ಸದಸ್ಯರು ಭಾಷಣ ಮಾಡಿದ ತಕ್ಷಣ ಸದನದಿಂದ ಹೊರಹೋಗುವಂತಿಲ್ಲ' ಎಂದು ರಿಜಿಜು ತಿಳಿಸಿದರು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಮೂಲಕ ಕೇಂದ್ರ ಸರ್ಕಾರವು 'ಭಾರತ ಮಾತೆಯನ್ನು' ಮಾರಾಟ ಮಾಡಿದೆ ಮತ್ತು ಭಾರತದ ಇಂಧನ ಭದ್ರತೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಿ ರೈತರ ಹಿತಾಸಕ್ತಿಗಳಿಗೆ ಧಕ್ಕೆ ತರುವ 'ಸಗಟು ಶರಣಾಗತಿ'ಯಾಗಿದೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ಕಿಡಿಕಾರಿದ ರಿಜಿಜು, ಭಾರತವನ್ನು ಯಾರೂ ಮಾರಾಟ ಮಾಡಲು ಅಥವಾ ಖರೀದಿಸಲು ಸಾಧ್ಯವಿಲ್ಲ. ಯಾರೂ ಅದರ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. 2011-12ರಲ್ಲಿ, ಭಾರತವನ್ನು ಐದು ದುರ್ಬಲ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಈಗ ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿಸಿದ್ದೇವೆ ಮತ್ತು ಮೂರನೇ ಅತಿದೊಡ್ಡ ರಾಷ್ಟ್ರವಾಗಲು ಸಿದ್ಧರಾಗಿದ್ದೇವೆ' ಎಂದರು.
Advertisement