

ಲೋಕಸಭೆಯಲ್ಲಿ ತಮ್ಮ ಭಾಷಣದ ನಂತರ ನಿನ್ನೆ ಬುಧವಾರ ಸಂಸತ್ ಭವನದ ಹೊರಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಡುವೆ ಕ್ಷಣಿಕ ಹಾಗೂ ಹಾಸ್ಯಭರಿತ ಮಾತುಕತೆ ನಡೆದಿದೆ. ಜೆಫ್ರಿ ಎಪ್ಸ್ಟೀನ್ ದಾಖಲೆಗಳ ಕುರಿತು ರಾಹುಲ್ ಗಾಂಧಿ ಮಾಡಿದ ಉಲ್ಲೇಖಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಇಂತಹ ಆರೋಪಗಳನ್ನು ಮಾಡುವ ಮೊದಲು ಅವುಗಳನ್ನು ದೃಢೀಕರಿಸಬೇಕು ಎಂದು ವರದಿಗಾರರಿಗೆ ಹೇಳುತ್ತಿದ್ದರು.
ಇದೇ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರ ಕಾಂಗ್ರೆಸ್ ಸಂಸದರು ಜೊತೆಯಲ್ಲಿದ್ದ ರಾಹುಲ್ ಗಾಂಧಿ, ಮಾಧ್ಯಮಗಳ ಮುಂದೆ ನಾವು ಒಟ್ಟಿಗೆ ಮಾತನಾಡೋಣ ಎಂದು ಪ್ರಲ್ಹಾದ್ ಜೋಶಿಯವರನ್ನು ಕೇಳಿಕೊಂಡರು.
ಬನ್ನಿ ನಾವು ಒಟ್ಟಿಗೆ ನಿಲ್ಲೋಣ... ಒಟ್ಟಿಗೆ ಮಾತನಾಡೋಣ ಎಂದು ರಾಹುಲ್ ಗಾಂಧಿ ಹೇಳಿದರು. ಆದರೆ ಅದಕ್ಕೆ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸದೇ ಅಲ್ಲಿಂದ ತೆರಳಿದರು; ಕೊನೆಗೆ ರಾಹುಲ್ ಗಾಂಧಿ ಒಬ್ಬರೇ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಘನತೆ, ಗೌರವಗಳಿಂದ ನಡೆದುಕೊಳ್ಳಬೇಕಾವರು ಬಾಲಕನಂತೆ, ಏನೂ ಅರಿಯದವರಂತೆ, ಸಾಮಾನ್ಯ ಜ್ಞಾನ ತಿಳುವಳಿಕೆ ಇಲ್ಲದಂತೆ ರಾಹುಲ್ ಗಾಂಧಿ ವರ್ತಿಸಿದ್ದಾರೆ ಎಂದು ಬಿಜೆಪಿ ನಾಯಕರು ಮತ್ತು ಸಮಾಜದ ಒಂದಷ್ಟು ಮಂದಿ ಟ್ರೋಲ್ ಮಾಡುತ್ತಿದ್ದಾರೆ.
ಫೋರ್ಟಿಫೈಡ್ ಅಕ್ಕಿಯನ್ನು ಸಾಮಾನ್ಯ ಅಕ್ಕಿಯೊಂದಿಗೆ ಮಿಶ್ರಣ ಮಾಡುವಲ್ಲಿ ತಾಂತ್ರಿಕ ಸಮಸ್ಯೆಗಳಿಲ್ಲ
ಮಿಲ್ಲಿಂಗ್ ಹಂತದಲ್ಲಿ 1:100 ಅನುಪಾತದಲ್ಲಿ ಫೋರ್ಟಿಫೈಡ್ ಅಕ್ಕಿ ಕಣಗಳನ್ನು (FRKs) ಸಾಮಾನ್ಯ ಅಕ್ಕಿಯೊಂದಿಗೆ ಮಿಶ್ರಣ ಮಾಡುವಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ವರದಿಯಾಗಿಲ್ಲ ಎಂದು ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಜಾರಿಗೆ ತಂದಿರುವ ಈ ಯೋಜನೆಯ ಉದ್ದೇಶ ಅನೀಮಿಯಾ ಸೇರಿದಂತೆ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನಿವಾರಿಸುವುದಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, ಸಮಗ್ರ ಬಾಲ ಅಭಿವೃದ್ಧಿ ಸೇವೆಗಳು (ICDS) ಮತ್ತು ಪಿಎಂ ಪೋಷಣ್ ಯೋಜನೆಗಳಡಿ ಹಂತ ಹಂತವಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. FRKಗಳನ್ನು ಅಕ್ಕಿ ಹಿಟ್ಟು, ಕಬ್ಬಿಣ (ಐರನ್), ಫೋಲಿಕ್ ಆಮ್ಲ ಮತ್ತು ವಿಟಮಿನ್ B12 ಸೇರಿಸಿ ತಯಾರಿಸಿ, ಸಾಮಾನ್ಯ ಅಕ್ಕಿಯೊಂದಿಗೆ ಮಿಶ್ರಣ ಮಾಡಲಾಗುತ್ತದೆ.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ನೀಡಲು ಡಿಎಂಕೆ ಆಗ್ರಹ
ರಾಜ್ಯಸಭೆಯಲ್ಲಿ ಶೂನ್ಯಕಾಲದ ವೇಳೆ ಡಿಎಂಕೆ ಸದಸ್ಯ ಪಿ. ವಿಲ್ಸನ್ ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ (NCM) ಸಂವಿಧಾನಿಕ ಸ್ಥಾನಮಾನ ನೀಡುವಂತೆ ಮತ್ತು ಅದರ ತನಿಖಾ ಹಾಗೂ ಜಾರಿಗೆ ಸಂಬಂಧಿಸಿದ ಅಧಿಕಾರಗಳನ್ನು ಬಲಪಡಿಸುವಂತೆ ಮನವಿ ಮಾಡಿದರು.
ಅಲ್ಪಸಂಖ್ಯಾತ ಸಮುದಾಯಗಳಿಗೆ ಹೆಚ್ಚು ಬಲವಾದ ಸಂಸ್ಥಾತ್ಮಕ ರಕ್ಷಣೆಯ ಅಗತ್ಯವಿದೆ ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಗುಂಪು ಹಲ್ಲೆಗಳು, ಪಾದ್ರಿಗಳ ಮೇಲೆ ದಾಳಿ, ಚರ್ಚ್ ಮತ್ತು ಮಸೀದಿಗಳ ಧ್ವಂಸ ಘಟನೆಗಳನ್ನು ಉಲ್ಲೇಖಿಸಿದರು. 2020ರಿಂದ ಧರ್ಮಾಂತರ ವಿರೋಧಿ ಕಾನೂನು ಅಡಿ ಸುಮಾರು 400 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
Advertisement