

ತಮಿಳು ನಾಡು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ಕೆಲವೊಮ್ಮೆ ವೈಯಕ್ತಿಕ ವಿಚಾರಗಳನ್ನು ಕೆಣಕುತ್ತಾ ಎಲ್ಲೆ ಮೀರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಟಿವಿಕೆ ಅಧ್ಯಕ್ಷ ದಳಪತಿ ವಿಜಯ್ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಸ್ಪರ್ಧೆ ಮತ್ತು ಗೆಲುವಿನ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯ್ ತುಂಬಾ ಸರಳ ವ್ಯಕ್ತಿ, ಅವರಿಗೆ ರಾಜಕೀಯ ಅರ್ಥವಾಗುವುದಿಲ್ಲ. ಮೊದಲು ಅವರು ತಮ್ಮ ಗೂಡಿನಿಂದ ಹೊರಬರಬೇಕು. ತಮ್ಮ ಕುಟುಂಬ ಜೊತೆ ಉತ್ತಮ ಸಂಬಂಧ ಹೊಂದಬೇಕು, ಜೊತೆಗೆ ತಮಿಳುನಾಡಿನ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ತ್ರಿಶಾ ಅವರ ಮನೆಯಿಂದಲೂ ಹೊರಬರಬೇಕು ಎಂದು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕನಾರೊಬ್ಬರು ಈ ರೀತಿ ವಿಜಯ್ ಅವರನ್ನು ವೈಯಕ್ತಿಕವಾಗಿ ಟೀಕಿಸುವುದಷ್ಟೇ ಅಲ್ಲದೆ, ನಟಿ ತ್ರಿಶಾ ಅವರ ಹೆಸರನ್ನೂ ಉಲ್ಲೇಖಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಅನಗತ್ಯ ಮತ್ತು ಅಸಂಬದ್ಧ ಟೀಕೆ ಎಂದು ಹಲವರು ಆಕ್ಷೇಪಿಸಿದ್ದಾರೆ.
ವಿಜಯ್ ಅವರ ರಾಜಕೀಯ ನಿಲುವುಗಳನ್ನು ಟೀಕಿಸುವುದು ಸಹಜವಾದರೂ, ಅವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುವುದು ಮತ್ತು ನಟಿ ತ್ರಿಶಾ ಅವರನ್ನು ಇದರಲ್ಲಿ ಎಳೆತಂದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದಳಪತಿ ವಿಜಯ್ ಅಭಿಮಾನಿಗಳು ನಾಗೇಂದ್ರನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಒತ್ತಾಯಿಸುತ್ತಿದ್ದಾರೆ.
ಇನ್ನೊಂದೆಡೆ, ತಮಿಳುನಾಡು ತೀವ್ರ ವಿಧಾನಸಭಾ ಚುನಾವಣಾ ಹೋರಾಟದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರಗಳಲ್ಲಿ ಇಂತಹ ತೀಕ್ಷ್ಣ ಹೇಳಿಕೆಗಳು ಇನ್ನಷ್ಟು ಕಾಣಿಸಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿನಲ್ಲಿ ಚತುರ್ಮುಖ ಸ್ಪರ್ಧೆ ತೀವ್ರಗೊಂಡಿದೆ. ಆಡಳಿತದಲ್ಲಿರುವ ದ್ರಾವಿಡ ಮುನ್ನೇತ್ರ ಕಳಗಂ (DMK) ಮೈತ್ರಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ADMK)-ಬಿಜೆಪಿ ಮೈತ್ರಿ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಇತ್ತ ಸೀಮಾನ್ ಅವರ ನಾಮ್ ತಮಿಳರ್ ಕಚ್ಚಿ (NTK) ಮತ್ತು ವಿಜಯ್ ಅವರ TVK ಪಕ್ಷಗಳು ಚುನಾವಣಾ ಹೋರಾಟಕ್ಕೆ ಹೊಸ ಆಯಾಮಗಳನ್ನು ನೀಡಿವೆ.
ಪತ್ರಕರ್ತರೊಂದಿಗೆ ಮಾತನಾಡಿದ ನೈನಾರ್ ನಾಗೇಂದ್ರನ್, ವಿಜಯ್ ಅವರ ರಾಜಕೀಯ ಅರ್ಹತೆ ಮತ್ತು ಅನುಭವವನ್ನು ಪ್ರಶ್ನಿಸಿದರು. “ ವಿಜಯ್ಗೆ ಏನೂ ಗೊತ್ತಿಲ್ಲ; ಅವರಿಗೆ ಯಾವುದೇ ಅನುಭವವಿಲ್ಲ. ಮೊದಲು ಅವರು ತಮ್ಮ ಮನೆಯಿಂದ ಹೊರಬರಬೇಕು. ತ್ರಿಶಾ ಅವರೊಂದಿಗೆ ಇರುವ ಸಂಬಂಧದಿಂದ ಹೊರಬಂದಾಗ ಮಾತ್ರ ಅವರಿಗೆ ವಾಸ್ತವಿಕತೆ ಗೊತ್ತಾಗುತ್ತದೆ. ಒಂದು ರಾಜ್ಯವನ್ನು ಮುನ್ನಡೆಸುವ ಮೊದಲು ತಮ್ಮ ಕುಟುಂಬ ಸಂಬಂಧಗಳನ್ನು ಅವರು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
Advertisement