

ಶ್ರೀನಗರ: ಕಿಶ್ತ್ವಾರ್ನ ಚತ್ರೂ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಆರಂಭಿಸಿದ್ದ ಆಪರೇಷನ್ ತ್ರಾಶಿ-I ಕಾರ್ಯಾಚರಣೆ ಯಶಸ್ವಿಯಾಗಿದ್ದು, ಕಾರ್ಯಾಚರಣೆಯಲ್ಲಿ ಭದ್ರತಾಪಡೆಗಳು ಜೈಷ್-ಎ-ಮೊಹಮ್ಮದ್ ಸಂಘಟನೆಯ ಟಾಪ್ ಕಮಾಂಡರ್ ಸೈಫುಲ್ಲಾ ಸೇರಿದಂತೆ ಒಟ್ಟು ಏಳು ಉಗ್ರರನ್ನು ಸದೆಬಡಿದಿದೆ.
ಪೊಲೀಸ್, ಸಿಆರ್ಪಿಎಫ್ ಮತ್ತು ಸೇನೆಪಡೆಗಳು ಕಿಶ್ತ್ವಾರ್ನ ಛತ್ರೂ ಅರಣ್ಯದ ಪಾಸರ್ಕುಟ್ ಪ್ರದೇಶದಲ್ಲಿ ಆಪರೇಷನ್ ಟ್ರಾಶಿ-I ಕಾರ್ಯಾಚರಣೆ ಆರಂಭಿಸಿತ್ತು, ಭಾನುವಾರ ನಡೆದ ಎನ್ಕೌಂಟರ್ನಲ್ಲಿ ಜೆಇಎಂ ಟಾಪ್ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿದೆ.
ಜಮ್ಮು-ಕಾಶ್ಮೀರದಲ್ಲಿ ಕಳೆದ ಐದು ವರ್ಷಗಳಿಂದ ಸಕ್ರಿಯವಾಗಿದ್ದ ಸೈಫುಲ್ಲಾ, ಭದ್ರತಾ ಪಡೆಗಳ ಮೇಲೆ ನಡೆದ ಹಲವಾರು ದಾಳಿಯಲ್ಲಿ ಭಾಗಿಯಾಗಿದ್ದ.
2024ರ ಜುಲೈನಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಫುಲ್ಲಾ ಹತ್ಯೆಯನ್ನು ಸೇನೆ ದೃಢಪಡಿಸಿದೆ. ಕಿಶ್ತ್ವಾರ್ ಪ್ರದೇಶದಲ್ಲಿ 326 ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿದ್ದು, ಛತ್ರೂ ಅರಣ್ಯ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಎಲ್ಲಾ ಏಳು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.
ಜೆಇಎಂ ಟಾಪ್ ಕಮಾಂಡರ್ ಸೈಫುಲ್ಲಾ ಈ ಹಿಂದೆ ಹಲವು ಬಾರಿ ತಪ್ಪಿಸಿಕೊಂಡಿದ್ದ. ಭಾನುವಾರ ನಡೆದ ಕಾರ್ಯಾಚರಣೆಯನ್ನು ಇಬ್ಬರು ಸಹಚರರೊಂದಿಗೆ ಕೊನೆಗೂ ಸಾವನ್ನಪ್ಪಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಎಫ್ಪಿವಿ ಡ್ರೋನ್ಗಳು, ಉಪಗ್ರಹ ಚಿತ್ರಣ, ಆರ್ಪಿಎ/ಯುಎವಿ ವ್ಯವಸ್ಥೆಗಳು ಹಾಗೂ ಉನ್ನತ ಸಂವಹನ ಸಾಧನಗಳನ್ನು ಬಳಸಲಾಗಿದೆ. ನಾಗರಿಕ ಹಾಗೂ ಸೈನಿಕ ಗುಪ್ತಚರ ಸಂಸ್ಥೆಗಳ ಮೂಲಕ ಉಗ್ರರ ಚಲನವಲನವನ್ನು ಪತ್ತೆ ಹಚ್ಚಿ ಉಗ್ರರ ಹೆಡೆಮುರಿ ಕಟ್ಟಲಾಗಿದೆ ಎಂದು ಸೇನೆ ವಿವರಿಸಿದೆ.
ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಜಮ್ಮು ಪ್ರದೇಶದಲ್ಲಿ ಉಗ್ರ ಚಟುವಟಿಕೆಗಳ ಪುನರಾರಂಭಕ್ಕೆ ಪ್ರಯತ್ನಿಸುತ್ತಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಭಾರೀ ಹೊಡೆತ ನೀಡಿದಂತಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜನವರಿ 18ರಂದು ನಡೆದ ಎನ್ಕೌಂಟರ್ನಲ್ಲಿ ಪ್ಯಾರಾ ಕಮಾಂಡೋ ಒಬ್ಬರು ಹುತಾತ್ಮರಾಗಿದ್ದರು. ಬಳಿಕ ಈ ಪ್ರದೇಶದಲ್ಲಿ ಭಾರೀ ಕಾರ್ಯಾಚರಣೆ ಆರಂಭಿಸಲಾಗಿತ್ತು. ಫೆಬ್ರವರಿ 4ರಂದು ಗುಹೆಯೊಳಗೆ ನಡೆದ ಡ್ರೋನ್ ದಾಳಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು.
ಸೇನೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು, ಭದ್ರತಾ ಪಡೆಗಳ ವೃತ್ತಿಪರತೆ ಮತ್ತು ದೃಢಸಂಕಲ್ಪವನ್ನು ಶ್ಲಾಘಿಸಿದ್ದು, “ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿಯೊಂದಿಗೆ ಭಾರತೀಯ ಸೇನೆ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಬದ್ಧವಾಗಿದೆ” ಎಂದು ಹೇಳಿದ್ದಾರೆ.
Advertisement