

ನವದೆಹಲಿ: ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ ಜಿಮ್ ತರಬೇತುದಾರ ದೀಪಕ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಅವರ ಜಿಮ್ ಗೆ ಸೇರುವುದಾಗಿ ಹೇಳಿದ್ದಾರೆ.
ಕೋಟ್ ದ್ವಾರದಲ್ಲಿ ಜಿಮ್ ಹೊಂದಿರುವ ದೀಪಕ್ ಕುಮಾರ್ ಅವರು, ಬಾಬಾ ಹೆಸರಿನ ಮುಸ್ಲಿಂ ವ್ಯಕ್ತಿಯೊಬ್ಬರ ಬಟ್ಟೆ ಅಂಗಡಿಯ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಜರಂಗದಳದ ಕಾರ್ಯಕರ್ತರನ್ನು ಎದುರಿಸಿದ್ದರು. ನಂತರ ಹಲ್ಕ್ ಹೆಸರಿನ ಅವರ ಜಿಮ್ ಅನ್ನು ಒಂದು ಡಜನ್ ಗೂ ಹೆಚ್ಚು ಜನ ತೊರೆದಿದ್ದರು. ಪರಿಣಾಮ ಅವರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದೀಗ ರಾಹುಲ್ ಗಾಂಧಿ ಅವರು ದೀಪಕ್ ಅವರಿಗೆ ವೈಯಕ್ತಿಕ ಬೆಂಬಲ ನೀಡಿದ್ದಾರೆ.
ದೀಪಕ್ ಅವರು ಇಂದು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ 10, ಜನಪಂಥ್ ನಿವಾಸದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಾಂಗ್ರೆಸ್ ನಾಯಕ ವೈಭವ್ ವಾಲಿಯಾ, ದೀಪಕ್ ಅವರ ಸ್ನೇಹಿತ ವಿಜಯ್ ರಾವತ್ ಮತ್ತು ಇತರರು ಉಪಸ್ಥಿತರಿದ್ದರು.
ಜನವರಿ 26 ರಂದು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ ಮತ್ತು ಮ್ಯಾಚಿಂಗ್ ಸೆಂಟರ್ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಬಜರಂಗದಳವನ್ನು ಎದುರಿಸಿ, ತಾನು ಮೊಹಮ್ಮದ್ ದೀಪಕ್ ಎಂದು ಪರಿಚಯಿಸಿಕೊಂಡಿದ್ದ ದೀಪಕ್ ಕುಮಾರ್ ಅವರು ರಾಷ್ಟ್ರೀಯ ಗಮನ ಸೆಳೆದಿದ್ದರು. ಅಂಗಡಿಯ ಮಾಲೀಕರು ಸಂಸ್ಥೆಯ ಹೆಸರನ್ನು ಬದಲಾಯಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು ಎನ್ನಲಾಗಿದೆ. ಅಂಗಡಿ ಮಾಲೀಕರು ನಿರಾಕರಿಸಿದಾಗ, ವಾದ ನಡೆಯಿತು, ನಂತರ ದೀಪಕ್ ಅಂಗಡಿಯವರನ್ನು ರಕ್ಷಿಸಲು ಮಧ್ಯಪ್ರವೇಶಿಸಿದ್ದರು.
ರಾಹುಲ್ ಗಾಂಧಿಯವರೊಂದಿಗಿನ ಭೇಟಿಯ ನಂತರ ಮಾತನಾಡಿದ ದೀಪಕ್, ಕಾಂಗ್ರೆಸ್ ನಾಯಕ ತಮ್ಮನ್ನು ಭೇಟಿ ಮಾಡಲು ಆಹ್ವಾನಿಸಿದ್ದರು. ಅಂಗಡಿಯವನ ಪರವಾಗಿ ನಿಲ್ಲುವುದು ಸರಿಯಾದ ಕೆಲಸ. ನೀನು ಯಾವ ತಪ್ಪು ಮಾಡಿಲ್ಲ. ಹಾಗಾಗಿ ಭಯ ಪಡುವ ಅಗತ್ಯ ಇಲ್ಲ ಎಂದು ನನಗೆ ಧೈರ್ಯ ತುಂಬಿದರು. ಭಯದಿಂದ ಬದುಕಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು ಮತ್ತು ಕೋಟ್ ದ್ವಾರಕ್ಕೆ ಭೇಟಿ ನೀಡಿ ಅವರ ಜಿಮ್ನ ಸದಸ್ಯತ್ವ ಪಡೆಯುವುದಾಗಿ ತಿಳಿಸಿದ್ದಾರೆ ಎಂದರು. ಸಭೆಯ ಸಮಯದಲ್ಲಿ ಸೋನಿಯಾ ಗಾಂಧಿ ಅವರನ್ನು ಪರಿಚಯಿಸಲಾಯಿತು ಎಂದು ದೀಪಕ್ ಹೇಳಿದರು.
ಇನ್ನೂ ದೀಪಕ್ ಅವರಿಗೆ ಬೆಂಬಲ ಸೂಚಿಸಿರುವ ಸುಪ್ರೀಂ ಕೋರ್ಟ್ನ ಸುಮಾರು ಒಂದು ಡಜನ್ ಹಿರಿಯ ವಕೀಲರು, ತಲಾ 10,000 ರೂ. ಪಾವತಿಸಿ ಜಿಮ್ನ ಒಂದು ವರ್ಷದ ಸದಸ್ಯತ್ವ ಪಡೆದಿದ್ದಾರೆ.
ಇದಕ್ಕೂ ಮುನ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಬಿಜೆಪಿ ಮತ್ತು ಸಂಘ ಪರಿವಾರ ಸಂವಿಧಾನವನ್ನು ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವೀಯತೆಯ ಪರವಾಗಿ ನಿಂತಿದ್ದಕ್ಕಾಗಿ ದೀಪಕ್ ಅವರನ್ನು ಶ್ಲಾಘಿಸಿದ್ದಾರೆ ಮತ್ತು ಅವರನ್ನು “ದ್ವೇಷದ ಮಾರುಕಟ್ಟೆಯಲ್ಲಿ ‘ಮೊಹಬ್ಬತ್ ಕಿ ದುಕಾನ್’ ನ ಜೀವಂತ ಸಂಕೇತ” ಎಂದು ಕರೆದಿದ್ದಾರೆ.
Advertisement