

ಪಾಟ್ನಾ: ಹಿಜಾಬ್ ಮತ್ತು ನಿಖಾಬ್ ಧರಿಸಿದವರು ಸೇರಿದಂತೆ ಮುಖ ಮುಚ್ಚಿಕೊಂಡ ಗ್ರಾಹಕರಿಗೆ ಪ್ರವೇಶ ನಿರಾಕರಿಸಲು ಆಭರಣ ಅಂಗಡಿಗಳ ಮಾಲೀಕರ ನಿರ್ಧಾರಿಸಿದ್ದು, ಬಿಹಾರದಲ್ಲಿ ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಇಂತಹ ಕ್ರಮ ಜಾರಿಗೆ ತರುತ್ತಿರುವುದು ಇದೇ ಮೊದಲು.
ಅಪರಾಧವನ್ನು ತಡೆಗಟ್ಟುವ ಉದ್ದೇಶವನ್ನು ಅಂಗಡಿ ಮಾಲೀಕರು ಹೊಂದಿದ್ದಾರೆ ಎಂದು ಹೇಳಿದ್ದರೂ, ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಇದನ್ನು ತೀವ್ರವಾಗಿ ವಿರೋಧಿಸಿದೆ. ಇದು ಸಂವಿಧಾನಬಾಹಿರ ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳ ಮೇಲಿನ ದಾಳಿಯಾಗಿದೆ ಎಂದು ಟೀಕಿಸಿದೆ.
ಈ ಕ್ರಮವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ ಎಂದು ಆರ್ಜೆಡಿ ವಕ್ತಾರ ಎಜಾಜ್ ಅಹ್ಮದ್ ಹೇಳಿದ್ದಾರೆ. ಈ ನಿರ್ಧಾರಕ್ಕೆ ಅವರು ಬಿಜೆಪಿ-ಆರ್ಎಸ್ಎಸ್ ಅನ್ನು ದೂಷಿಸಿದ್ದಾರೆ.
ಈ ಕ್ರಮವು ದೇಶದ ಸಾಂವಿಧಾನಿಕ ಮತ್ತು ಜಾತ್ಯತೀತ ರಚನೆಯನ್ನು ದುರ್ಬಲಗೊಳಿಸಬಹುದು ಎಂದು ಆರ್ಜೆಡಿ ನಾಯಕರು ಎಚ್ಚರಿಸಿದ್ದಾರೆ.
"ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಈ ನಿರ್ಧಾರ ತೆಗೆದುಕೊಂಡ ಆಭರಣ ಅಂಗಡಿ ಮಾಲೀಕರೊಂದಿಗೆ ಮಾತನಾಡಬೇಕು. ಅಪರಾಧವನ್ನು ತಡೆಗಟ್ಟಲು ಇತರ ಕ್ರಮಗಳಿವೆ" ಎಂದು ಅವರು ಹೇಳಿದ್ದಾರೆ.
ಅಖಿಲ ಭಾರತ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ಒಕ್ಕೂಟ(AIGJF) ಮಂಗಳವಾರ, ಹಿಜಾಬ್, ಬುರ್ಖಾ, ಸ್ಕಾರ್ಫ್, ಹೆಲ್ಮೆಟ್ ಅಥವಾ ಯಾವುದೇ ರೀತಿಯ ಬಟ್ಟೆ ಅಥವಾ ವಸ್ತುಗಳಿಂದ ಮುಖ ಮುಚ್ಚಿಕೊಂಡಿರುವ ಗ್ರಾಹಕರನ್ನು ಆಭರಣ ಶೋರೂಮ್ಗಳ ಒಳಗೆ ಅನುಮತಿಸಲಾಗುವುದಿಲ್ಲ ಎಂದು ಘೋಷಿಸಿದೆ.
ಹೊಸ ನಿಯಮದ ಅಡಿಯಲ್ಲಿ, ಖರೀದಿದಾರರಿಗೆ ಸರಿಯಾದ ಮುಖ ಗುರುತಿಸುವಿಕೆಯ ನಂತರವೇ ಪ್ರವೇಶವನ್ನು ಅನುಮತಿಸಲಾಗುತ್ತದೆ. ರಾಜ್ಯಾದ್ಯಂತ ಇಂತಹ ನಿರ್ಧಾರವನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಬಿಹಾರವಾಗಿದೆ ಎಂದು AIGJF ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಆಭರಣ ಅಂಗಡಿಗಳಲ್ಲಿ ಕಳ್ಳತನ, ದರೋಡೆ ಮತ್ತು ಡಕಾಯಿತಿಯಂತಹ ಅಪರಾಧಗಳನ್ನು ತಡೆಗಟ್ಟುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು AIGJFನ ರಾಜ್ಯಾಧ್ಯಕ್ಷ ಅಶೋಕ್ ಕುಮಾರ್ ವರ್ಮಾ ಹೇಳಿದ್ದಾರೆ.
ಆಭರಣ ಶೋರೂಮ್ಗಳಲ್ಲಿ ಹೆಚ್ಚುತ್ತಿರುವ ದರೋಡೆ ಮತ್ತು ಡಕಾಯಿತಿ ಘಟನೆಗಳ ಬಗ್ಗೆ AIGJF ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು. "ಮುಖ ಮುಚ್ಚಿಕೊಂಡು ಅಂಗಡಿಗಳಿಗೆ ಪ್ರವೇಶಿಸಿ ಆಭರಣಗಳೊಂದಿಗೆ ಪರಾರಿಯಾಗಿರುವ ಹಲವಾರು ಘಟನೆಗಳ ಉದಾಹರಣೆ ನಮ್ಮಲ್ಲಿವೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement