

ನವದೆಹಲಿ: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಬರೋಬ್ಬರಿ 100 ದಿನದ ಬಳಿಕ ನಡೆಯುತ್ತಿದ್ದು, ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಭಾರತದ ಜೈನ ಮುನಿಯೊಬ್ಬರಿಗೆ ಇರಾನ್ ಆಹ್ವಾನ ನೀಡಿದೆ.
ಅಂತರರಾಷ್ಟ್ರೀಯ ಸಾಮಾಜಿಕ ಸಂಘಟನೆಯಾದ ಅಹಿಂಸಾ ವಿಶ್ವ ಭಾರತಿಯನ್ನು ಸ್ಥಾಪಿಸಿದ ಭಾರತದ ಜೈನ ಸನ್ಯಾಸಿ ಮತ್ತು ಆಧ್ಯಾತ್ಮಿಕ ನಾಯಕ ಆಚಾರ್ಯ ಲೋಕೇಶ್ ಮುನಿ ಅವರಿಗೆ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.
ಆಚಾರ್ಯ ಲೋಕೇಶ್ ಮುನಿ ಅವರು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸರ್ವಧರ್ಮ ಸಮನ್ವಯಕ್ಕಾಗಿ ಶ್ರಮಿಸುತ್ತಿರುವ ಪ್ರಮುಖ ಧರ್ಮಗುರು. ಇರಾನ್ನ ಪರಮೋಚ್ಚ ನಾಯಕರ ಕಚೇರಿಯ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ನಿರ್ದೇಶಕ ಮೊಹ್ಸೆನ್ ಕುಮ್ಮಿ ಅವರು ಈ ಅಧಿಕೃತ ಆಹ್ವಾನ ಪತ್ರವನ್ನು ಕಳುಹಿಸಿದ್ದಾರೆ.
ಅಂತರರಾಷ್ಟ್ರೀಯ ಸಂಬಂಧಗಳ ಇಲಾಖೆಯ ನಿರ್ದೇಶಕ ಮೊಹ್ಸೆನ್ ಕುಮ್ಮಿ ಸಹಿ ಮಾಡಿದ ಆಹ್ವಾನ ಪತ್ರದಲ್ಲಿ ಭಾರತ ಮತ್ತು ಇರಾನ್ ನಡುವಿನ ಹಳೆಯ ಸ್ನೇಹ ಸಂಬಂಧದ ಬಗ್ಗೆ ಉಲ್ಲೇಖಿಸಲಾಗಿದೆ.
‘ಭಾರತದ ಪ್ರಮುಖ ಅತಿಥಿಯಾಗಿ ಈ ಶೋಕಸಭೆಯಲ್ಲಿ ಪಾಲ್ಗೊಳ್ಳುವಂತೆ ನಿಮಗೆ ಗೌರವಪೂರ್ವಕ ಆಹ್ವಾನ ನೀಡುತ್ತಿದ್ದೇವೆ. ನಿಮ್ಮ ಉಪಸ್ಥಿತಿಯು ಉಭಯ ಪುರಾತನ ನಾಗರಿಕತೆಗಳ ನಡುವಿನ ಗಾಢವಾದ ಸ್ನೇಹ ಮತ್ತು ಗೌರವಕ್ಕೆ ಸಾಕ್ಷಿಯಾಗಲಿದೆ' ಎಂದು ಬರೆಯಲಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಖಮೇನಿ ಅಂತ್ಯಕ್ರಿಯೆಯನ್ನು ಸಂಘರ್ಷದಿಂದಾಗಿ ಮುಂದೂಡಲಾಗಿತ್ತು. ಇದೀಗ ಜುಲೈ 5ರಿಂದ ಜುಲೈ 9ರ ವರೆಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿದ್ದು, ಇರಾನ್ ಸೇರಿದಂತೆ ವಿವಿಧ ನಗರಗಳಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ. ಈ ವೇಳೆ 1 ಕೋಟಿಗೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆಯಿದೆ.
ಜುಲೈ 5, 6 ಮತ್ತು 7 ರಂದು ಟೆಹ್ರಾನ್ ಹಾಗೂ ಕೋಮ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಂತಿಮ ವಿಧಿವಿಧಾನಗಳು ಜುಲೈ 9 ರಂದು ಮಶಾದ್ ನಗರದಲ್ಲಿ ನಡೆಯಲಿವೆ.