ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಪಕ್ಷಾಂತರ ಪರ್ವ ತೀವ್ರ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷದ ಸಂಸದರು ಮತ್ತು ಶಾಸಕರನ್ನು ಖರೀದಿಸುವ ಪ್ರಯತ್ನಗಳು ವೇಗ ಪಡೆಯುತ್ತಿದ್ದಂತೆ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ತಮ್ಮ ಪಕ್ಷವಾದ ಎನ್ಸಿಪಿ(ಎಸ್ಪಿ)ಗೆ ಎರಡು ಸಂಭಾವ್ಯ ರಾಜಕೀಯ ಆಯ್ಕೆಗಳ ಕುರಿತು ಒಂದು ಕಾಂಗ್ರೆಸ್ ಜೊತೆ ವಿಲೀನಗೊಳ್ಳುವುದು ಅಥವಾ ಬಿಜೆಪಿ ನೇತೃತ್ವದ ಎನ್ಡಿಎಗೆ ಬೆಂಬಲ ನೀಡುವ ಕುರಿತು ಮಾತುಕತೆ ಆರಂಭಿಸಿದ್ದಾರೆ.
ಎನ್ಸಿಪಿ(ಎಸ್ಪಿ) ಎಂಟು ಲೋಕಸಭಾ ಸಂಸದರನ್ನು ಮತ್ತು 10 ಶಾಸಕರನ್ನು ಹೊಂದಿದೆ. ಅದರ ಎಂಟು ಸಂಸದರಲ್ಲಿ, ಐದು ಸಂಸದರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣಕ್ಕೆ ಸೇರಲು ಉತ್ಸುಕರಾಗಿದ್ದಾರೆಂದು ಹೇಳಲಾಗುತ್ತಿದೆ. ಉಳಿದವರು ಬಿಜೆಪಿ ನೇತೃತ್ವದ ಎನ್ಡಿಎ ಜೊತೆ ಸೇರಲು ಒಲವು ತೋರಿದ್ದಾರೆ.
ಇನ್ನು ಪಕ್ಷದ 10 ಶಾಸಕರು ಸಹ ಇಬ್ಭಾಗವಾಗಿದ್ದು, ಕೆಲವರು ಕಾಂಗ್ರೆಸ್ ಜೊತೆ ವಿಲೀನಗೊಳ್ಳಲು ಬಯಸಿದರೆ, ಇತರರು ಆಡಳಿತರೂಢ ಮೈತ್ರಿಕೂಟಕ್ಕೆ ಸೇರಲು ಬಯಸುತ್ತಾರೆ.
ಎರಡು ಬಾರಿ ತಮ್ಮದೇ ಪಕ್ಷವನ್ನು ಆರಂಭಿಸುವ ಮೊದಲು ಕಾಂಗ್ರೆಸ್ನಲ್ಲಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ 86 ವರ್ಷದ ಶರದ್ ಪವಾರ್ ಅವರು, ತಮ್ಮ ಮಗಳು ಸಂಸದೆ ಸುಪ್ರಿಯಾ ಸುಳೆ ಮತ್ತು ಅವರ ನಿಷ್ಠಾವಂತರಿಗೆ ದೊಡ್ಡ ಹುದ್ದೆಯನ್ನು ನೀಡಿದರೆ ಎನ್ಸಿಪಿ(ಎಸ್ಪಿ)ಯನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಲು ಸಿದ್ಧರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
"ಪವಾರ್ ಅವರು ತಮ್ಮ ಬಣದಿಂದ ಒಬ್ಬ ನಾಯಕನನ್ನು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕು. ಅವರ ಮಗಳನ್ನು ಉಪಾಧ್ಯಕ್ಷರನ್ನಾಗಿ ನೇಮಿಸಬೇಕು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ನೀಡಬೇಕು ಎಂದು ಕೋರಿದ್ದಾರೆ. ಇಂತಹ ಕ್ರಮವು ಅವರ ಪಕ್ಷ ವಿಭಜನೆಯನ್ನು ತಡೆಯುವುದಲ್ಲದೆ, ವಿರೋಧ ಪಕ್ಷವನ್ನು ಬಲಪಡಿಸುತ್ತದೆ" ಎಂದು ಹೆಸರು ಬಹಿರಂಗಪಡಿಸಲು ಬಯಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಎನ್ಸಿಪಿ(ಎಸ್ಪಿ)ಯೊಳಗಿನ ಒಂದು ಪ್ರಮುಖ ಬಣವು, ಆಡಳಿತರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಲು ಬಯಸುತ್ತಿದೆ ಮತ್ತು ಕೇಂದ್ರದಲ್ಲಿ ಎನ್ಡಿಎ ಭಾಗವಾಗಲು ಬಯಸುತ್ತಿದೆ ಎಂದು ಮತ್ತೊಬ್ಬ ಹಿರಿಯ ನಾಯಕರು ಹೇಳಿದ್ದಾರೆ.
"ಸುಪ್ರಿಯಾ ಸುಳೆ ಅವರ ಮಗಳು ನಾಗ್ಪುರ ಮೂಲದ ಆರ್ಎಸ್ಎಸ್ ಹಿನ್ನಲೆ ಹೊಂದಿರುವ ಕುಟುಂಬಕ್ಕೆ ವಿವಾಹವಾಗಿ ಹೋಗಿದ್ದಾರೆ. ಅವರು ಪವಾರ್ ಅವರನ್ನು ಎನ್ ಡಿಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದು, ನಾಗ್ಪುರ ಮೂಲದ ಹಿರಿಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಎನ್ಸಿಪಿ(ಎಸ್ಪಿ)ಯ ಸುಪ್ರಿಯಾ ಸುಳೆ ಅವರಿಗೆ ಕೇಂದ್ರ ಸಚಿವ ಸ್ಥಾನ ಮತ್ತು ಪವಾರ್ ಅವರಿಗೆ ನಿಷ್ಠರಾಗಿರುವ ಪಕ್ಷದ ಹಿರಿಯ ನಾಯಕರಿಗೆ ಎರಡು ಸಚಿವ ಸ್ಥಾನಗಳನ್ನು ಕೋರಿದ್ದಾರೆ" ಎಂದು ಹೆಸರು ಬಹಿರಂಗಪಡಿಸಲು ಬಯಸದ ನಾಯಕರು ತಿಳಿಸಿದ್ದಾರೆ.
ಕಾಂಗ್ರೆಸ್ ಜೊತೆ ಎನ್ಸಿಪಿ(ಎಸ್ಪಿ) ವಿಲೀನದ ಕುರಿತು ರಾಜ್ಯ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಹೇಳಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಬದ್ಧ ಎಂದಿದ್ದಾರೆ.
ಆದಾಗ್ಯೂ, ಪವಾರ್ ತಮ್ಮ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿಲ್ಲ. ಬದಲಾಗಿ ಬಿಜೆಪಿಯೊಂದಿಗೆ ತಮ್ಮ ಚೌಕಾಶಿಯನ್ನು ಬಲಪಡಿಸಲು ಈ ಮಾತುಕತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
"ಪವಾರ್ ಅವರು ಸ್ವತಃ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಅವರ ಮಗಳು ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.