

ಜೈಪುರ (ರಾಜಸ್ಥಾನ): ಸರ್ಕಾರಿ ಕೆಲಸ (Government Job) ಅಂದ್ರೆ ದೇವರ ಕೆಲಸ ಎನ್ನುತ್ತಾರೆ. ಅಂತಹ ಸರ್ಕಾರಿ ಕೆಲಸಕ್ಕಾಗಿ ಲಕ್ಷಾಂತರ ಜನರು ಹಗಲು - ರಾತ್ರಿ ಎನ್ನದೇ ಓದಿ, ಎಕ್ಸಾಂ ಪಾಸ್ ಮಾಡಿ ಸರ್ಕಾರಿ ಅಧಿಕಾರಿ ಆಗುತ್ತಾರೆ. ಆದರೆ ಹುದ್ದೆಯಲ್ಲಿದ್ದಾಗಲೇ ಅದೆಷ್ಟೋ ಜನರು ಅಕಾಲಿಕ ಮರಣ ಹೊಂದುತ್ತಾರೆ. ಹಾಗಾಗಿಯೇ, ಅಂತವರ ಕುಟುಂಬಕ್ಕಾಗಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಲಾಗುತ್ತದೆ. ಆದರೆ ಈ ಅನುಕಂಪದ ಕೆಲಸಕ್ಕಾಗಿ (Compassionate Work) ಇಂದು ಅನೇಕರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಅದರಲ್ಲೂ ಕೆಲವರು ಸ್ವಂತ ಅಪ್ಪ - ಅಮ್ಮ ಎಂದು ನೋಡದೆ ಕೊಲೆ ಮಾಡಲು ಮುಂದಾಗುತಿದ್ದಾರೆ.! ಅದಕ್ಕೆ ಲೇಟೆಸ್ಟ್ ಉದಾಹರಣೆ ರಾಜಸ್ಥಾನದಲ್ಲಿ (Rajasthan) ನಡೆದಿರುವ ಘಟನೆ! ಹೌದು, ಜೈಪುರದಲ್ಲಿ (Jaipur) ಸರ್ಕಾರಿ ಕೆಲಸಕ್ಕಾಗಿ ಜನ್ಮ ನೀಡಿದ ಅಮ್ಮನನ್ನೇ ಮಗಳು ಕೊಲೆ ಮಾಡಿದ್ಧಾಳೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಘಟನೆ?
ವಿಜಯ್ ಕುಮಾರ್ ಶರ್ಮಾ ಎಂಬುವವರು, ಜೈಪುರದ ನ್ಯಾಯಾಲಯದಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಸುಮಾರು ಒಂದೂವರೆ ವರ್ಷದ ಹಿಂದೆ ಅಕಾಲಿಕ ಸಾವನ್ನಪಿದರು. ಹಾಗಾಗಿ, ಆತನ ಸರ್ಕಾರೀ ಕೆಲಸವು ಅನುಕಂಪದ ಆಧಾರದಲ್ಲಿ ಅವನ ಹೆಂಡತಿ 45 ವರ್ಷದ ನೀರಜ್ ಶರ್ಮಾಳಿಗೆ ಸಿಕ್ಕಿತು. ಆದರೆ, ಕೆಳೆದ ಜುಲೈ 3 ರ ಸಂಜೆ 4:45 ಕ್ಕೆ ಆಕೆಯೂ ಕೂಡ ರಸ್ತೆ ಅಪಘಾತದಲ್ಲಿ ಮರಣಹೊಂದಿದರು. ಅದರಂತೆ ಈ ಪ್ರಕರಣವನ್ನ ಹಿಟ್ ಅಂಡ್ ರನ್ ಎಂದು ದೂರು ದಾಖಲಿಸಿ ಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದರು. ಆದರೆ, ಅಲ್ಲೇ ನೋಡಿ ಸಿಕ್ಕಿದು ಟ್ವಿಸ್ಟ್!
ಅದುವೇ ಇದು ಅಪಘಾತವಲ್ಲ, ಬದಲಾಗಿ ಪಕ್ಕಾ ಪ್ಲಾನ್ ಮಾಡಿ ಕೊಲೆ ಮಾಡಲಾಗಿದೆ. ಅದರಲ್ಲೂ, ಈ ಕೊಲೆಯ ಹಿಂದೆ ನೀರಜ್ ಪುತ್ರಿ 23 ವರ್ಷದ ಆಯುಷಿಯೇ ಇರುವುದು ಎಂದು ತಿಳಿದ ನಂತರ ಪೊಲೀಸರು ಕೂಡ ದಂಗಾಗಿದ್ದಾರೆ.
ಹೌದು, ನೀರಜ್ ಶರ್ಮಾಳನ್ನು ಆಕೆಯ ಮಗಳೇ ತಂದೆಯ ಸರ್ಕಾರಿ ಕೆಲಸದ ಆಸೆಗಾಗಿ, 3 ತಿಂಗಳಿಂದ ತನ್ನ ಚಿಕ್ಕಪ್ಪನೊಂದಿಗೆ ಸೇರಿ ಪಕ್ಕಾ ಪ್ಲಾನ್ ಮಾಡಿ ಹತ್ಯೆ ಮಾಡಿರುವುದಾಗಿ ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.
7 ಲಕ್ಷ ಸುಪಾರಿ!
ಪೊಲೀಸರ ಪ್ರಕಾರ, ಆರೋಪಿ ಆಯುಷಿ ಶರ್ಮಾ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸಂಬಂಧಿಕ ಬಲರಾಮ್ ಜೊತೆ ಸೇರಿ, ಅಮ್ಮನನ್ನು ಕೊಲ್ಲಲು ₹7 ಲಕ್ಷ ನೀಡಿ ಸುಪಾರಿ ಹಂತಕರನ್ನು ನೇಮಿಸಿಕೊಂಡಿದ್ದಳು ಎನ್ನಲಾಗಿದೆ.
ಅಪ್ಪನ ಕೆಲಸದ ಮೇಲಿನ ಆಸೆಯೇ ಕಾರಣ?
ವಿಜಯ್ ನಿಧನದ ನಂತರ, ಆತನ ಸರ್ಕಾರಿ ಕೆಲಸವು ಪತ್ನಿ ನೀರಜ್ ಅವರಿಗೆ ಅನುಕಂಪದ ಆಧಾರದ ಮೇಲೆ ಸಿಕ್ಕಿತ್ತು. ಆದರೆ, ತನಗೆ ಸಿಗಬೇಕಾಗಿದ್ದ ಸರ್ಕಾರಿ ಕೆಲಸವು ಅಮ್ಮನ ಪಾಲಾಯಿತು ಎಂದು ಅಸಮಾಧಾನಗೊಂಡಿದ್ದ ಆಯುಷಿ, ಕೊನಗೆ ತನ್ನ ತಾಯಿಯನ್ನೇ ಮುಗಿಸಲು ಸಂಚು ರೂಪಿಸಿದಾಳೆ. ಏತನ್ಮಧ್ಯೆ, ಇದಕ್ಕೂ ಮೊದಲು ಆಯುಷಿಗೂ ಆಕೆಯ ತಾಯಿಗೂ ಆಸ್ತಿ ವಿಷಯವಾಗಿ ವಿವಾದವಿತ್ತು ಎನ್ನಲಾಗಿದೆ.