

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಗುಗ್ಗರಟ್ಟಿಯಲ್ಲಿ ಕೌಟುಂಬಿಕ ಕಲಹಕ್ಕೆ ಇಬ್ಬರು ಬಲಿಯಾಗಿದ್ದು, ವ್ಯಕ್ತಿಯೊಬ್ಬ ಸಮಸ್ಯೆ ಬಗೆಹರಿಸಿಕೊಳ್ಳುವ ನೆಪದಲ್ಲಿ ಪತ್ನಿ ಹಾಗೂ ಮಾವನನ್ನು ಮಾತುಕತೆಗಾಗಿ ಮನೆಗೆ ಕರೆಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ತೇಜಾ, ತನ್ನ ಪತ್ನಿ ನಾಗಲಕ್ಷ್ಮೀ(24) ಹಾಗೂ ಆಕೆಯ ತಂದೆ ಶ್ರೀನಿವಾಸ(48) ಅವರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ. ತೇಜಾ ತಂದೆ ಗುರುಶಂಕರ್ ಮೇಲೂ ಕೊಲೆ ಆರೋಪ ಕೇಳಿಬಂದಿದೆ.
ಸದಾ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ತೇಜಾ, ಈ ಸಮಸ್ಯೆ ಬಗ್ಗೆ ಮಾತುಕತೆ ನಡೆಸಬೇಕೆಂದು ಪತ್ನಿ ಹಾಗೂ ಮಾವನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಹರಿತವಾದ ಆಯುಧಗಳಿಂದ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಪರಾರಿಯಾಗದೆ ಇಬ್ಬರು ಆರೋಪಿಗಳು ಶವಗಳ ಮುಂದೆಯೇ ಕುಳಿತಿದ್ದರು ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.