ಭೂಕುಸಿತದ ಎಫೆಕ್ಟ್: ಜುಲೈ 17 ರವರೆಗೆ ಮುಂಬೈ-ಪುಣೆ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ; 30 ರೈಲುಗಳು ರದ್ದು

ಜುಲೈ 6 ರಂದು ಸುರಿದ ಧಾರಾಕಾರ ಮಳೆಯಿಂದ ಕರ್ಜತ್ ಮತ್ತು ಲೋನಾವಾಲ ನಿಲ್ದಾಣಗಳ ನಡುವೆ ಅನೇಕ ಭೂಕುಸಿತಗಳು ಸಂಭವಿಸಿದ್ದು, ಮಾರ್ಗದಲ್ಲಿನ ಮೂರು ರೈಲು ಮಾರ್ಗಗಳಿಗೆ ತೀವ್ರ ಹಾನಿಯಾಗಿದೆ.
Mumbai-Pune rail disruption till July 17 as Central Railway cancels 30 trains after landslides
ಸಾಂದರ್ಭಿಕ ಚಿತ್ರ
Updated on

ಮುಂಬೈ: ಭಾರೀ ಮಳೆಗೆ ಭೋರ್ ಘಾಟ್ ವಿಭಾಗದಲ್ಲಿ ಭೂಕುಸಿತ ಸಂಭವಿಸಿದ ನಂತರ ಮುಂಬೈ-ಪುಣೆ ಕಾರಿಡಾರ್‌ನ ರೈಲು ಸೇವೆಯಲ್ಲಿ ಜುಲೈ 17 ರವರೆಗೆ ಭಾರೀ ವ್ಯತ್ಯಯವಾಗಿದ್ದು, ಕೇಂದ್ರ ರೈಲ್ವೆ 30 ದೀರ್ಘ-ದೂರ ಮತ್ತು ಇಂಟರ್‌ಸಿಟಿ ರೈಲುಗಳನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಜುಲೈ 6 ರಂದು ಸುರಿದ ಧಾರಾಕಾರ ಮಳೆಯಿಂದ ಕರ್ಜತ್ ಮತ್ತು ಲೋನಾವಾಲ ನಿಲ್ದಾಣಗಳ ನಡುವೆ ಅನೇಕ ಭೂಕುಸಿತಗಳು ಸಂಭವಿಸಿದ್ದು, ಮಾರ್ಗದಲ್ಲಿನ ಮೂರು ರೈಲು ಮಾರ್ಗಗಳಿಗೆ ತೀವ್ರ ಹಾನಿಯಾಗಿದೆ.

ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಮತ್ತು ಮಂಕಿ ಹಿಲ್ ಕ್ಯಾಬಿನ್‌ಗಳ ಬಳಿ ಭೂಕುಸಿತ ಸಂಭವಿಸಿದ ಬಗ್ಗೆ ವರದಿಯಾಗಿವೆ. ಇದು ರೈಲು ಸೇವೆಗಳಲ್ಲಿ ದೀರ್ಘಕಾಲದ ಅಡಚಣೆಗೆ ಕಾರಣವಾಗಿದೆ.

ರೈಲು ಸೇವೆ ಪುನಃಸ್ಥಾಪನೆ ಕಾರ್ಯವು ಯುದ್ಧೋಚಿತವಾಗಿ ನಡೆಯುತ್ತಿದ್ದರೂ, ಕಷ್ಟಕರವಾದ ಭೂಪ್ರದೇಶ ಮತ್ತು ಅಪಾಯಕಾರಿ ಕೆಲಸದ ಪರಿಸ್ಥಿತಿಗಳು ಸಾಮಾನ್ಯ ಸ್ಥಿತಿಗೆ ಮರಳಲು ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್ ರೈಲ್ವೆ, ಒಂದು ಪ್ರಕಟಣೆಯಲ್ಲಿ, 14 ದೈನಂದಿನ ರೈಲುಗಳು, ನಿರ್ದಿಷ್ಟ ದಿನಾಂಕಗಳಲ್ಲಿ ಎಂಟು ಸೇವೆಗಳು ಮತ್ತು ಎಂಟು ವಿಶೇಷ ರೈಲುಗಳು ಸೇರಿದಂತೆ 30 ರೈಲು ಸೇವೆಗಳನ್ನು ರದ್ದುಗೊಳಿಸಿದೆ ಎಂದು ತಿಳಿಸಿದೆ.

Mumbai-Pune rail disruption till July 17 as Central Railway cancels 30 trains after landslides
ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸುರಂಗ ಬಳಿ ಕುಸಿತ: "ಮಳೆಯಲ್ಲಿ ಕೊಚ್ಚಿಹೋದ 7 ಸಾವಿರ ಕೋಟಿ"- ಸಪ್ಕಲ್

ಜುಲೈ 10 ರಿಂದ ಜುಲೈ 17 ರವರೆಗೆ ಡೆಕ್ಕನ್ ಕ್ವೀನ್, ಡೆಕ್ಕನ್ ಎಕ್ಸ್‌ಪ್ರೆಸ್, ಮುಂಬೈ ಮತ್ತು ಪುಣೆ ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಸೇವೆಗಳು, ಸಿಎಸ್‌ಎಂಟಿ-ಹೈದರಾಬಾದ್ ಎಕ್ಸ್‌ಪ್ರೆಸ್, ಚೆನ್ನೈ ಎಗ್ಮೋರ್ ಸೂಪರ್‌ಫಾಸ್ಟ್ ಮೇಲ್ ಮತ್ತು ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ಸೇರಿದಂತೆ ದೈನಂದಿನ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವುದಾಗಿ ಪ್ರಕಟಣೆ ತಿಳಿಸಿದೆ.

ಇದರ ಜೊತೆಗೆ, ಮಹಾಲಕ್ಷ್ಮಿ ಎಕ್ಸ್‌ಪ್ರೆಸ್, ಜೋಧ್‌ಪುರ-ಹಡಪ್ಸರ್ ಎಕ್ಸ್‌ಪ್ರೆಸ್, ದಾದರ್-ಸತಾರಾ ಎಕ್ಸ್‌ಪ್ರೆಸ್ ಮತ್ತು ದಾದರ್-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ನಂತಹ ರೈಲುಗಳನ್ನು ಈ ಅವಧಿಯಲ್ಲಿ ನಿರ್ದಿಷ್ಟ ದಿನಾಂಕಗಳಲ್ಲಿ ರದ್ದುಗೊಳಿಸಲಾಗಿದೆ.

ಮುಂಬೈ ಮತ್ತು ಪುಣೆಯನ್ನು ಗೋರಖ್‌ಪುರ, ಘಾಜಿಪುರ ನಗರ ಮತ್ತು ಹಜರತ್ ನಿಜಾಮುದ್ದೀನ್‌ಗಳೊಂದಿಗೆ ಸಂಪರ್ಕಿಸುವ ಹಲವಾರು ವಿಶೇಷ ರೈಲುಗಳನ್ನು ಸಹ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ರೈಲು ಸೇವೆ ಪುನಃಸ್ಥಾಪನೆ ಕಾರ್ಯವನ್ನು ಪರಿಶೀಲಿಸಿದರು. ಭೂಕುಸಿತ ಪರಿಣಾಮ ರೈಲ್ವೆ ಮಾರ್ಗಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ "ದೊಡ್ಡ ಪ್ರಮಾಣದಲ್ಲಿ" ಹಾನಿಯನ್ನುಂಟುಮಾಡಿರುವುದನ್ನು ಸಚಿವರು ಗಮನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com