

ನವದೆಹಲಿ: ಭಾರತೀಯ ಪೌರತ್ವ ವಿವಾದಕ್ಕೆ (Citizenship Controversy) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಮಹತ್ವದ ತೀರ್ಪು ನೀಡಿದ್ದು, "ಹಳೆಯ ಮತದಾರರ ಪಟ್ಟಿ ಅಥವಾ ಸರ್ಕಾರಿ ದಾಖಲೆಗಳಲ್ಲಿನ ಹೆಸರಿನಲ್ಲಿ ಸ್ಪೆಲ್ಲಿಂಗ್ ತಪ್ಪುಗಳ ಕಾರಣಕ್ಕಾಗಿ ವಿದೇಶಿಯರು ಎಂದು ಘೋಷಿಸುವುದು ತಪ್ಪು" ಎಂದು ಸೂಚಿಸಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಪ್ರಕರಣ?
ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನು (ವಿಶೇಷವಾಗಿ ಬಾಂಗ್ಲಾದೇಶದಿಂದ ಬಂದವರನ್ನು) ಗುರುತಿಸಲು ದೀರ್ಘಕಾಲದಿಂದ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಅಲ್ಲಿ ಫಾರಿನರ್ಸ್ ಟ್ರಿಬ್ಯುನಲ್ ಎಂಬ ವಿಶೇಷ ನ್ಯಾಯಾಧಿಕರಣಗಳನ್ನು ಸ್ಥಾಪಿಸಲಾಗಿದೆ. ಅದರಂತೆ, ಪೊಲೀಸರು ಅಥವಾ ಚುನಾವಣಾ ಆಯೋಗವು ಯಾರ ಮೇಲಾದರೂ ವಿದೇಶಿ ಎಂಬ ಸಂಶಯ ವ್ಯಕ್ತಪಡಿಸಿದರೆ, ಅವರು ಟ್ರಿಬ್ಯುನಲ್ ಮುಂದೆ ತಾವು ಭಾರತೀಯರು ಎಂದು ಸಾಬೀತುಪಡಿಸಬೇಕಾಗುತ್ತದೆ.
ಹೀಗೆ, ಅಜರ್, ಅಬಿದಾ ಸೇರಿದಂತೆ 27 ಜನರು ತಾವು ಭಾರತೀಯರೆಂದು ಸಾಬೀತುಪಡಿಸಲು 1951ರ NRC ದಾಖಲೆಗಳು, ಹಲವು ದಶಕಗಳ ಹಳೆಯ ಮತದಾರರ ಪಟ್ಟಿ ಮತ್ತು ಭೂ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ, ಹಳೆಯ ದಾಖಲೆಗಲ್ಲಿ, ಇವರ ತಂದೆ-ತಾಯಂದಿರ ಹೆಸರಿನ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದವು. ಕೇವಲ ಈ ವ್ಯತ್ಯಾಸಗಳನ್ನೇ ಮುಂದಿಟ್ಟುಕೊಂಡು ಟ್ರಿಬ್ಯುನಲ್ ಇವರನ್ನು ವಿದೇಶಿಯರು ಎಂದು ಘೋಷಿಸಿತ್ತು. ಇದನ್ನು ಗುವಾಹಟಿ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಹಾಗಾಗಿ, ಎಲ್ಲಾ 27 ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.
ಅಕ್ಷರ ದೋಷಗಳಿಂದ ವಿದೇಶಿಯರಾಗಲು ಹೇಗೆ ಸಾಧ್ಯ?
ಮುಂದುವರೆದು, ಅರ್ಜಿದಾರರು, "ನಾವು ತಲೆಮಾರುಗಳಿಂದ ಇಲ್ಲೇ ಬದುಕುತ್ತಿದ್ದೇವೆ. ಅಧಿಕಾರಿಗಳು ದಾಖಲೆಗಳನ್ನು ಸಿದ್ಧಪಡಿಸುವಾಗ ಮಾಡುವ ಅಕ್ಷರ ದೋಷಗಳಿಂದ ನಾವು ವಿದೇಶಿಯರಾಗಲು ಹೇಗೆ ಸಾಧ್ಯ?" ಎಂದು ವಾದಿಸಿದ್ದರು. ಇನ್ನು, ಅರ್ಜಿ ವಿಚಾರಣೆ ನಡೆಸಿದ ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ನ ನ್ಯಾ. ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, "ಕೇವಲ ತಾಂತ್ರಿಕ ಕಾರಣಗಳಿಗಾಗಿ ನಾಗರಿಕತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿ ಗುವಾಹಟಿ ಹೈಕೋರ್ಟ್ ಆದೇಶವನ್ನ ರದ್ದು ಮಾಡಿದೆ. ಇದರೊಂದಿಗೆ, ನ್ಯಾಯಾಲಯವು, ಇವರೆಲ್ಲರನ್ನೂ ಡಿಟೆಂಷನ್ ಕ್ಯಾಂಪ್ಗೆ ಹಾಕದಂತೆ ಸರ್ಕಾರಕ್ಕೆ ಸೂಚಿಸಿದ್ದು, ಪ್ರಕರಣವನ್ನು ನ್ಯಾಯಯುತವಾಗಿ ಮರುಪರಿಶೀಲಿಸುವಂತೆ ಆದೇಶಿಸಿದೆ.
ಮುಂದುವರೆದು, ಅಕ್ರಮ ವಲಸಿಗರನ್ನು ತಡೆಯುವ ಸರ್ಕಾರದ ಪ್ರಕ್ರಿಯೆಯಲ್ಲಿ ದೇಶದ ನಿಜವಾದ ನಾಗರಿಕರಿಗೆ ಅನ್ಯಾಯವಾಗಬಾರದು ಮತ್ತು ನ್ಯಾಯಾಂಗದ ನಿಷ್ಪಕ್ಷಪಾತತೆಯನ್ನು ಕಡೆಗಣಿಸಬಾರದು ಎಂದು ಸೂಚಿಸಿದೆ.