

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆ ಸೇರಿ ಆಪರೇಷನ್ ಟೈಗರ್ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ 6 ಲೋಕಸಭಾ ಸಂಸದರನ್ನು ತನ್ನತ್ತ ಸೆಳೆದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದೀಗ ಮಹಾ ರಾಜಕೀಯದಲ್ಲಿ ಮತ್ತೊಂದು ಆಪರೇಷನ್ಗೆ ಮುಂದಾಗಿದ್ದು, ಈ ಬಾರಿ ಅವರ ಟಾರ್ಗೆಟ್ NCP ಆಗಿದ್ದು, ಈ ಬಾರಿ ಪಕ್ಷವನ್ನ ಇಬ್ಬಾಗ ಮಾಡುವ ಬದಲು ಇಡೀ ಪಕ್ಷವನ್ನೇ ತನ್ನತ್ತ ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕಳೆದ ವಾರ ಏಕನಾಥ್ ಶಿಂಧೆ ಅವರ ಕಚೇರಿಯಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಶಾಸಕರ ಸಭೆ ನಡೆಸಿದ್ದಾರೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಎನ್ಸಿಪಿ(ಎಸ್ಪಿ) ಸಂಸದೆ ಸುಪ್ರಿಯಾ ಸುಳೆ, ಈ ಘಟನೆ "ಸಂಪೂರ್ಣ ಕಾಕತಾಳೀಯ" ಎಂದು ಬುಧವಾರ ಹೇಳಿದ್ದಾರೆ.
ರಾಜಕೀಯ ಸಭೆಗಳನ್ನು ಅನುಮಾನದಿಂದ ನೋಡಬಾರದು ಮತ್ತು ರಾಜಕೀಯ ನಾಯಕರ ನಡುವಿನ ಪ್ರತಿಯೊಂದು ಸಭೆಯೂ ಪಿತೂರಿಯ ಭಾಗವಾಗಿದೆ ಎಂದು ಜನ ಭಾವಿಸುವುದನ್ನು ನಿಲ್ಲಿಸಬೇಕೆಂದು ಶರದ್ ಪವಾರ್ ಪುತ್ರಿ ಹೇಳಿದ್ದಾರೆ.
ಕಳೆದ ಬುಧವಾರ ಮುಂಬೈನ ವಿಧಾನ ಭವನ ಸಂಕೀರ್ಣದಲ್ಲಿರುವ ಶಿಂಧೆ ಅವರ ಕಚೇರಿಯಲ್ಲಿ ಶರದ್ ಪವಾರ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ್ದರು.
ದೀರ್ಘಕಾಲದಿಂದ ಬಾಕಿ ಇರುವ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ರಾಜ್ಯ ಸರ್ಕಾರ ರಚಿಸಿದ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿ ಸಭೆಯಲ್ಲಿ ಭಾಗವಹಿಸಲು ಹಿರಿಯ ನಾಯಕ ಶರದ್ ಪವಾರ್ ಅವರು ರಾಜ್ಯ ವಿಧಾನಭವನ ಆವರಣದಲ್ಲಿದ್ದರು. ಸಭೆಯ ನಂತರ, ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ(ಎಂವಿಎ)ಯ ಒಂದು ಘಟಕವಾಗಿರುವ ಪವಾರ್, ಶಿಂಧೆ ಅವರನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿದ್ದರು.
ಈ ಸಭೆಯು ರಾಜಕೀಯ ಊಹಾಪೋಹಗಳಿಗೆ ನಾಂದಿ ಹಾಡಿದ್ದು, NCP(SP) ಮಿತ್ರಪಕ್ಷ ಶಿವಸೇನೆ(UBT)ಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಇದು ದೇಶದ್ರೋಹಿಗಳನ್ನು ವೈಭವೀಕರಿಸುವ ನಡೆ ಎಂದು ಸೇನಾ ಯುಬಿಟಿ ಕಿಡಿ ಕಾರಿದೆ.
ಇದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಳೆ, ಪವಾರ್ ಅವರಿಗೆ ನೀವು ಕಷ್ಟಪಟ್ಟು ಬರುವುದು ಬೇಡ ಎಂದು ಕೇಳಿಕೊಂಡರೂ ಅವರು ಶಾಸಕಾಂಗ ಸಂಕೀರ್ಣಕ್ಕೆ ಬಂದಿದ್ದರು. ಕೆಲವು ಶಾಸಕರು(NCP-SP) ತಮ್ಮೊಂದಿಗೆ ಕೆಲವು ನಿಮಿಷಗಳನ್ನು ಕಳೆಯಲು ಅವರನ್ನು ಕೇಳಿಕೊಂಡರು, ನಂತರ ಅವರು (ಶಿಂಧೆ) ಅವರ ಕ್ಯಾಬಿನ್ ಪ್ರವೇಶಿಸಿದರು. ಇದು ಕಾಕತಾಳೀಯ ಅಷ್ಟೇ ಎಂದಿದ್ದಾರೆ.
"ಸಂಸತ್ತಿನಲ್ಲಿ ಮತ್ತು ಯಾವುದೇ ವಿಧಾನಸಭೆಯಲ್ಲಿ, ಪ್ರಧಾನಿ ಕಚೇರಿ ಮತ್ತು ಮುಖ್ಯಮಂತ್ರಿ ಕಚೇರಿ ಮಾತ್ರ ನಿಗದಿತ ಸ್ಥಳಗಳನ್ನು ಹೊಂದಿವೆ. ಇತರ ನಾಯಕರ ಕಚೇರಿಗಳು ಬದಲಾಗುತ್ತಲೇ ಇರುತ್ತವೆ. ರಾಜಕೀಯದಲ್ಲಿ ಶಾಶ್ವತವಾದದ್ದು ಯಾವುದೂ ಇಲ್ಲ" ಎಂದು ಸುಳೆ ಹೇಳಿದ್ದಾರೆ.