

ನವದೆಹಲಿ: ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ 42 ವರ್ಷದ ರೋಗಿಯೊಬ್ಬರು ಆಸ್ಪತ್ರೆಯ ಸೀಲಿಂಗ್ ಫ್ಯಾನ್ ಕಳಚಿ ಅವರ ಹಾಸಿಗೆಯ ಮೇಲೆಯೇ ಬಿದ್ದ ಪರಿಣಾಮ ಮೃತಪಟ್ಟಿರುವ ಆಘಾತಕಾರಿ ಘಟನೆ ದೆಹಲಿಯ ಗುರು ತೇಗ್ ಬಹದ್ದೂರ್ (GTB) ಆಸ್ಪತ್ರೆಯಲ್ಲಿ ನಡೆದಿದೆ.
ಮೃತರನ್ನು ಎಂಡಿ ಅಕ್ಬರ್ (42) ಎಂದು ಗುರುತಿಸಲಾಗಿದ್ದು, ಈ ದುರ್ಘಟನೆಯು ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯದ ದುಸ್ಥಿತಿಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಅಲ್ಲದೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ.
ಮೂಲಗಳ ಪ್ರಕಾರ ಅಧಿಕ ರಕ್ತದೊತ್ತಡ (Hypertension), ಮೆನಿಂಗೋಎನ್ಸೆಫಲೈಟಿಸ್ (Meningoencephalitis) ಹಾಗೂ ಆಸ್ಪಿರೇಷನ್ ನ್ಯುಮೋನಿಯಾ (Aspiration Pneumonia) ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅವರ ಸಹೋದರ ಜಿಟಿಬಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದರು.
ಶನಿವಾರ ರಾತ್ರಿ ನರ್ಸಿಂಗ್ ಸಿಬ್ಬಂದಿ ಅಕ್ಬರ್ಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ, ಮೇಲ್ಛಾವಣಿಯ ಸೀಲಿಂಗ್ ಗೆ ಅಳವಡಿಸಲಾಗಿದ್ದ ಫ್ಯಾನ್ ಏಕಾಏಕಿ ಕಳಚಿ ಅವರ ಹಾಸಿಗೆ ಮೇಲಿದ್ದ ರೋಗಿ ಅಕ್ಬರ್ ಮೇಲೆಯೇ ಬಿದ್ದಿದೆ.
ಈ ಘಟನೆಯಲ್ಲಿ ಅಕ್ಬರ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡುತ್ತಿದ್ದ ನರ್ಸಿಂಗ್ ಅಧಿಕಾರಿಗೂ ಗಾಯಗಳಾಗಿವೆ. ಗಾಯಗೊಂಡ ಅಕ್ಬರ್ ಅವರನ್ನು ರಕ್ಷಿಸಲು ವೈದ್ಯರು ಪ್ರಯತ್ನಿಸಿದರೂ, ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
'ಫ್ಯಾನ್ ನೇರವಾಗಿ ರೋಗಿಯ ಹಾಸಿಗೆಯ ಮೇಲೆಯೇ ಬಿತ್ತು'
ಘಟನೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, "ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಸೀಲಿಂಗ್ ಫ್ಯಾನ್ ನೇರವಾಗಿ ಅವರ ಹಾಸಿಗೆಯ ಮೇಲೆ ಬಿದ್ದಿತು. ಚಿಕಿತ್ಸೆ ನೀಡುತ್ತಿದ್ದ ನರ್ಸಿಂಗ್ ಅಧಿಕಾರಿಗೂ ಗಾಯಗಳಾಗಿವೆ" ಎಂದು ತಿಳಿಸಿದ್ದಾರೆ.
ಮರಣ ಪ್ರಮಾಣಪತ್ರದಲ್ಲಿ ಬೇರೆ ಕಾರಣ ಉಲ್ಲೇಖ
ಗಮನಾರ್ಹ ಸಂಗತಿಯೆಂದರೆ, ಅಕ್ಬರ್ ಅವರ ಮರಣ ಪ್ರಮಾಣಪತ್ರದಲ್ಲಿ ಅಧಿಕ ರಕ್ತದೊತ್ತಡ, ಮೆನಿಂಗೋಎನ್ಸೆಫಲೈಟಿಸ್ ಮತ್ತು ಆಸ್ಪಿರೇಷನ್ ನ್ಯುಮೋನಿಯಾವೇ ಸಾವಿನ ಕಾರಣ ಎಂದು ಉಲ್ಲೇಖಿಸಲಾಗಿದೆ. ಆದರೆ ಫ್ಯಾನ್ ಬಿದ್ದು ಗಾಯಗೊಂಡ ಘಟನೆ ಅವರ ಸಾವಿಗೆ ಎಷ್ಟು ಕಾರಣವಾಯಿತು ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಆಸ್ಪತ್ರೆ ಮೌನ
ಈ ಆಘಾತಕಾರಿ ಘಟನೆ ಕುರಿತು ಜಿಟಿಬಿ ಆಸ್ಪತ್ರೆ ಆಡಳಿತ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆಸ್ಪತ್ರೆಯ ನಿರ್ವಹಣೆ ಹಾಗೂ ಮೂಲಸೌಕರ್ಯದ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಸಾರ್ವಜನಿಕರ ಆಕ್ರೋಶ
ಘಟನೆಯ ಬಳಿಕ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಆಸ್ಪತ್ರೆ ಎಂದರೆ ಚಿಕಿತ್ಸೆ ಸಿಗುವ ಸ್ಥಳವಾಗಿರಬೇಕು, ದುರಂತ ಸಂಭವಿಸುವ ಜಾಗವಾಗಬಾರದು," ಎಂದು ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬರು, "ವ್ಯವಸ್ಥೆಗೆ ನಾವು ಜಿರಳೆಗಳೇ? ಈ ರೀತಿಯ ನಿರ್ಲಕ್ಷ್ಯಕ್ಕೆ ಯಾರೂ ಹೊಣೆಗಾರರಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ, ನಿರ್ವಹಣಾ ವೈಫಲ್ಯ ಹಾಗೂ ರೋಗಿಗಳ ಸುರಕ್ಷತೆ ಕುರಿತು ಮತ್ತೆ ಗಂಭೀರ ಚರ್ಚೆಗೆ ಕಾರಣವಾಗಿದೆ.