ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಯ (CJP) ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಭಾನುವಾರ ಪಾಲ್ಗೊಂಡರು ಮತ್ತು ಪ್ರತಿಭಟನೆಗೆ ಬೆಂಬಲ ಸೂಚಿಸಿ ಆ ರಾತ್ರಿಯನ್ನು ಅಲ್ಲೇ ಕಳೆದರು. ಮರುದಿನ ಬೆಳಿಗ್ಗೆಯೂ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತ್ಯವನ್ನು ಹೇಳಲು ತಮಗೆ ಭಯವಿಲ್ಲ. 'ಸಾಯುವ ಮುನ್ನವೇ ನಾನು ಸಾಯಲು ಬಯಸುವುದಿಲ್ಲ' (ಮುಕ್ತವಾಗಿ ಮಾತನಾಡಲು ಅಥವಾ ತಾನು ನಂಬಿದ ವಿಷಯಗಳ ಪರವಾಗಿ ನಿಲ್ಲಲು ಸಾಧ್ಯವಾಗದಿರುವ ಜೀವನವು, ಬದುಕಿದ್ದರೂ 'ಸತ್ತಂತೆ') ಎಂದು ಹೇಳಿದರು.
'TheRedMike' ಯೂಟ್ಯೂಬ್ ಚಾನೆಲ್ನೊಂದಿಗಿನ ಸಂವಾದದ ವೇಳೆ, ಈ ಹಿಂದೆ ಅನುಪಮ್ ಖೇರ್ ಮತ್ತು ಅಮೀರ್ ಖಾನ್ ಅವರಂತಹ ಬಾಲಿವುಡ್ ನಟರು ಈ ಹಿಂದೆ ಸಾರ್ವಜನಿಕ ಚಳುವಳಿಗಳಲ್ಲಿ ಭಾಗವಹಿಸಿದ್ದಾರೆ ಅಥವಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವರ್ಷಗಳ ಕಾಲ ಟೀಕೆಗಳನ್ನು ಎದುರಿಸಿದ ನಂತರವೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರಕಾಶ್ ರಾಜ್ ಅವರಿಗೆ ಭಯವಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್, 'ನೋಡಿ ಮಿತ್ರರೇ, ಸುಳ್ಳು ಹೇಳಲು ಭಯಪಡಬೇಕು. ಸತ್ಯವನ್ನು ಹೇಳಲು ಯಾರಾದರೂ ಏಕೆ ಭಯಪಡಬೇಕು?. ಈ ದೇಶದಲ್ಲಿ ಪರಿಸ್ಥಿತಿ ಇಷ್ಟೊಂದು ಹೇಗೆ ಬದಲಾಗಿದೆ? ಸತ್ಯದ ಪರವಾಗಿ ನಿಲ್ಲುವುದು ಭಯಪಡುವ ವಿಷಯವಲ್ಲ. ಇದರಲ್ಲಿ ಭಯಪಡುವಂಥದ್ದು ಏನಿದೆ?' ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ನಾಯಕರ ಆದರ್ಶಗಳನ್ನು ಉಲ್ಲೇಖಿಸುತ್ತಾ, 'ಭಗತ್ ಸಿಂಗ್ ನಮಗೆ ಇದನ್ನು ಕಲಿಸಲಿಲ್ಲ, ಮಹಾತ್ಮ ಗಾಂಧಿ ಇದನ್ನು ಹೇಳಲಿಲ್ಲ, ಹಾಗೆಯೇ ನೆಲ್ಸನ್ ಮಂಡೇಲಾ ಅಥವಾ ಬಿಆರ್ ಅಂಬೇಡ್ಕರ್ ಕೂಡ ಇದನ್ನು ಹೇಳಲಿಲ್ಲ. ಯಾವುದೇ ರಾಜಕೀಯ ಕಾರ್ಯಸೂಚಿಗಿಂತ ಹೆಚ್ಚಾಗಿ ತಾನು ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುತ್ತಿರುವುದಾಗಿ ಪ್ರಕಾಶ್ ರಾಜ್ ಹೇಳಿದರು.
'ನಾನು ಇದನ್ನೆಲ್ಲ ಯಾರಿಗಾಗಿ ಮಾಡುತ್ತಿದ್ದೇನೆ ಎಂದು ಜನರು ಕೇಳುತ್ತಾರೆ. ನಾನು ಇದನ್ನು ದೇಶಕ್ಕಾಗಿ ಮಾಡುತ್ತಿಲ್ಲ; ನನಗಾಗಿಯೇ ಮಾಡುತ್ತಿದ್ದೇನೆ. ನನಗಿರೋದು ಒಂದೇ ಒಂದು ಆತ್ಮಸಾಕ್ಷಿ. ತಾವು ಎದುರಿಸುತ್ತಿರುವ ತೊಂದರೆಗಳು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಗಳ ಮುಂದೆ ಅತ್ಯಲ್ಪ. ನಾವು ಅಂಬೇಡ್ಕರ್, ಗಾಂಧಿ ಮತ್ತು ಭಗತ್ ಸಿಂಗ್ ಅವರನ್ನು ಗಮನಿಸಿದರೆ, ಅವರ ತ್ಯಾಗಕ್ಕೆ ಹೋಲಿಸಿದರೆ ನಮ್ಮ ತ್ಯಾಗಗಳೇನು? ದೇಶಕ್ಕಾಗಿ ಇಷ್ಟಾದರೂ ನೋವನ್ನು ನಾವು ಸಹಿಸಿಕೊಳ್ಳಲಾರವೇ?' ಎಂದು ಅವರು ಹೇಳಿದರು.
ತಮ್ಮ ನೇರ ಹಾಗೂ ಮುಕ್ತ ಅಭಿಪ್ರಾಯಗಳ ಕಾರಣದಿಂದಾಗಿ ಕೆಲವರು ತಮ್ಮೊಂದಿಗೆ ಗುರುತಿಸಿಕೊಳ್ಳಲು ಹಿಂಜರಿಯಬಹುದು ಎಂದು ಪತ್ರಕರ್ತರೊಬ್ಬರು ಹೇಳಿದಾಗ, 'ಮುಝೆ ಮರ್ನೆ ಸೆ ಪೆಹ್ಲೆ ನಹಿ ಮರ್ನಾ ಹೈ. ಜಿಂದಾ ರೆಹನಾ ಹೈ' (ನಾನು ನಿಜವಾಗಿಯೂ ಸಾಯುವ ಮೊದಲೇ ಸಾಯಲು ಬಯಸುವುದಿಲ್ಲ. ನಾನು ಜೀವಂತವಾಗಿರಲು ಬಯಸುತ್ತೇನೆ) ಎಂದು ತಿಳಿಸಿದರು.
ನೀಟ್ ಪ್ರವೇಶ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಗೆ ಆಗ್ರಹಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕೋರಿ, ಸಿಜೆಪಿ (CJP) ದೆಹಲಿಯ ಜಂತರ್ ಮಂತರ್ನಲ್ಲಿ ಜೂನ್ 6 ರಿಂದ ಪ್ರತಿಭಟನೆ ನಡೆಸುತ್ತಿದೆ.
ಜೂನ್ 28 ರಂದು ಸೋನಮ್ ವಾಂಗ್ಚುಕ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ನಂತರ ಈ ಪ್ರತಿಭಟನೆಯು ಹೆಚ್ಚಿನ ಗಮನ ಸೆಳೆಯಿತು. ಶನಿವಾರ ಅವರನ್ನು ಪೊಲೀಸರು ವಶಕ್ಕೆ ಪಡೆದರು ಮತ್ತು ನ್ಯಾಯಾಲಯದ ಮಧ್ಯಪ್ರವೇಶ ಕೋರಿ ಸಲ್ಲಿಸಲಾದ ಅರ್ಜಿಯ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.