

ಕಲ್ಯಾಣ್: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದ ಭೀಕರ ಕೊಲೆಯೊಂದು ಮನೆ ಮಾಲೀಕರಿಗೆ ಕಳುಹಿಸಲಾದ ಧ್ವನಿ ಸಂದೇಶದ ಮೂಲಕ ಬೆಳಕಿಗೆ ಬಂದಿದೆ.
ಕಳೆದ ಎರಡೂವರೆ ತಿಂಗಳಿನಿಂದ, ವಸತಿ ಸೊಸೈಟಿಯ ನಿವಾಸಿಗಳು ಬೀಗ ಹಾಕಿದ ಫ್ಲಾಟ್ನಿಂದ ನೀರು ಸೋರಿಕೆಯಾಗುತ್ತಿದೆ ಎಂದು ದೂರು ನೀಡುತ್ತಿದ್ದರು.
ಫ್ಲಾಟ್ ಮನ್ಪಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣ್ನ ನೀಲಕಂಠ ಸೊಸೈಟಿಯ ನಿವಾಸಿಗಳು ಎರಡೂವರೆ ತಿಂಗಳಿನಿಂದ ಫ್ಲಾಟ್ ಸಂಖ್ಯೆ 104 ರಿಂದ ನೀರು ಬರುತ್ತಿರುವ ಬಗ್ಗೆ ದೂರು ನೀಡುತ್ತಿದ್ದರು. ಈ ಸಂಬಂಧ ಮನೆ ಮಾಲೀಕ ಅಜಯ್ ಪಾಟೀಲ್ ಅವರು, ಬಾಡಿಗೆದಾರರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಫ್ಲಾಟ್ ಬಾಡಿಗೆಗೆ ಪಡೆದಿದ್ದ ಮಹಿಳೆಯಿಂದ ಪಾಟೀಲ್ಗೆ ಅವರಿಗೆ ಧ್ವನಿ ಸಂದೇಶ ಬಂದಿದ್ದು, ಅದನ್ನು ಕೇಳಿಸಿಕೊಂಡಾಗ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ, ಆ ಮಹಿಳೆ, ತನ್ನ ಪ್ರಿಯಕರನನ್ನು ಕೊಂದಿದ್ದಾಗಿ ಮತ್ತು ಆತನ ಶವವನ್ನು ಗೋಣಿ ಚೀಲಕ್ಕೆ ತುಂಬಿ ಬಾತ್ ರೂಂನಲ್ಲಿ ಇಟ್ಟಿರುವುದಾಗಿ ಹೇಳಿದ್ದಾಳೆ. ಅಲ್ಲದೇ ಶವವನ್ನು ಹೊರಗೆ ಹಾಕುವಂತೆ ಮನೆ ಮಾಲೀಕರನ್ನು ಕೇಳಿಕೊಂಡಿದ್ದಾಳೆ.
ಸಂದೇಶ ಕೇಳಿದ ತಕ್ಷಣ, ಪಾಟೀಲ್ ಅವರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಪೊಲೀಸ್ ಠಾಣೆಗೆ ಧಾವಿಸಿದ್ದಾರೆ.
ಪೊಲೀಸರು ಫ್ಲಾಟ್ ತಲುಪಿ ಅದನ್ನು ಹುಡುಕಿದಾಗ, ಬಾತ್ ರೂಂನಲ್ಲಿ ಚೀಲದೊಳಗೆ ತುಂಬಿದ ಶವ ಕಂಡುಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಪ್ರಿಯಕರನ ತಲೆಗೆ ಹರಿತವಾದ ಆಯುಧದಿಂದ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.
ರಕ್ತದ ಕಲೆಗಳನ್ನು ತೊಳೆಯಲು ಮತ್ತು ಇತರ ಪುರಾವೆಗಳನ್ನು ನಾಶಮಾಡಲು ಬಾತ್ ರೂಂನ ನಲ್ಲಿಯನ್ನು ಉದ್ದೇಶಪೂರ್ವಕವಾಗಿಯೇ ಓಪನ್ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ವಾರಗಟ್ಟಲೆ ನೀರು ಸೋರಿಕೆಯಾಗುವುದಕ್ಕೆ ಕಾರಣವಾಗಿದೆ ಎಂದು ವಿವರಿಸುತ್ತದೆ.
ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಹಿಳೆ, ಪ್ರಿಯಕರನ್ನು ಕೊಲೆ ಮಾಡಿದ ನಂತರ ಕೋಲ್ಕತ್ತಾಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಪತ್ತೆಹಚ್ಚಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ಕೋಲ್ಕತ್ತಾಗೆ ಕಳುಹಿಸಲಾಗಿದೆ.
ಮಹಿಳೆ ಬಂಧನದ ನಂತರವೇ ಕೊಲೆಗೆ ಸ್ಪಷ್ಟ ಕಾರಣ ತಿಳಿದುಬರಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.