

ನವದೆಹಲಿ: ಬಹುಶಃ ಶಿಕ್ಷಣ ಸಚಿವರಿಗೆ ರಾಜಿನಾಮೆ ಪತ್ರ ಬರೆಯುವುದೇ ಗೊತ್ತಿಲ್ಲ, ಆರ್ ಎಸ್ ಎಸ್ ಅವರಿಗೆ ರಾಜಿನಾಮೆ ಪತ್ರ ಬರೆಯುವುದನ್ನು ಕಲಿಸಿಲ್ಲ ಎಂದು TMC ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು,ಆರ್ ಎಸ್ ಎಸ್ ನಿಮಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುವುದನ್ನಷ್ಟೇ ಕಲಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷವು ಆಯೋಜಿಸಿರುವ ಪ್ರತಿಭಟನೆಗಳ ನಡುವೆ ಈ ಹೇಳಿಕೆ ಬಂದಿದೆ.
ಇದೇ ವೇಳೆ ನೀಟ್ ಹಾಗೂ ವಿದ್ಯಾರ್ಥಿಗಳ ಇತರೆ ನೈಜ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಸಂಸತ್ತಿನ ಸದನದಲ್ಲಿ ನೀಟ್ ಸೇರಿದಂತೆ ಯುವಕರ ಎಲ್ಲಾ ನೈಜ ಸಮಸ್ಯೆಗಳ ಕುರಿತು ಚರ್ಚಿಸಲು ನಮ್ಮ ಸರ್ಕಾರ ಶೇ.100ರಷ್ಟು ಸಿದ್ಧವಾಗಿದೆ. ಭಾರತದ ವಿದ್ಯಾರ್ಥಿಗಳನ್ನು ರಾಜಕೀಯ ಅಭಿಯಾನದ ವಸ್ತುವಾಗಿ ಬಳಸಬಾರದು ಎಂದು ಹೇಳಿದರು.