CJP Protest: 'ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಂಸ್ಕೃತಿ ಸೃಷ್ಟಿಸಬೇಕು': ಕೊನೆಗೂ ಮೌನ ಮುರಿದ Sachin Tendulkar

ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ, ಪ್ರಾಮಾಣಿಕತೆಗೆ ಗೌರವ ಸಿಗುವ ಮತ್ತು ಅರ್ಹತೆ ಗೆಲ್ಲುವ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕು. ನನ್ನ ತಂದೆ ಪ್ರಾಧ್ಯಾಪಕರಾಗಿದ್ದರು. ಅವರು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು..
Sachin Tendulkar
ಸಚಿನ್ ತೆಂಡೂಲ್ಕರ್
Updated on

ಮುಂಬೈ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೂ ಕೂಡ ಇದೇ ಮೊದಲ ಬಾರಿಗೆ ಈ ಕುರಿತು ಮಾತನಾಡಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಸಚಿನ್ ತೆಂಡೂಲ್ಕರ್, 'ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಂಸ್ಕೃತಿ ಸೃಷ್ಟಿಸಬೇಕು' ಎಂದು ಹೇಳಿದ್ದಾರೆ.

"ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ, ಪ್ರಾಮಾಣಿಕತೆಗೆ ಗೌರವ ಸಿಗುವ ಮತ್ತು ಅರ್ಹತೆ ಗೆಲ್ಲುವ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕು. ನನ್ನ ತಂದೆ ಪ್ರಾಧ್ಯಾಪಕರಾಗಿದ್ದರು. ಅವರು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.

ಅವರು ನನಗೆ ಬಾಲ್ಯದಲ್ಲೇ ಒಂದು ಪಾಠ ಕಲಿಸಿದ್ದರು – 'ವಿಫಲವಾಗುವುದು ತಪ್ಪಲ್ಲ, ಆದರೆ ಮೋಸ ಮಾಡುವುದು ತಪ್ಪು. ಯಾವುದೇ ಕಾರಣಕ್ಕೂ ಶಾರ್ಟ್‌ಕಟ್‌ಗಳನ್ನು ಹುಡುಕಬೇಡಿ. ವಿಫಲವಾಗಬಹುದು, ಆದರೆ ಮೋಸ ಮಾಡಬಾರದು'' ಎಂದು ಸಚಿನ್ ಬರೆದುಕೊಂಡಿದ್ದಾರೆ.

Sachin Tendulkar
ಸೋನಮ್, ಸಹೋದರ ಸಾಕು ನಿಲ್ಲಿಸು; ಪ್ರತಿಭಟನೆ ನಿಲ್ಲಿಸಿ ವಿದ್ಯಾರ್ಥಿಗಳೇ ಮನೆಗೆ ಹೋಗಿ: ಪ್ರಧಾನಿ ನೋಡ್ಕೋತಾರೆ; ಸಲ್ಮಾನ್ ಖಾನ್!

'ವಿದ್ಯಾರ್ಥಿಗಳ ನಿರಾಶೆ ಸಹಜ'

ಪರಿಶ್ರಮಕ್ಕಿಂತ ಫಲಿತಾಂಶಕ್ಕೇ ಹೆಚ್ಚು ಮಹತ್ವ ನೀಡುವ ಸಮಾಜದಲ್ಲಿ ಅರ್ಹತೆಗಿಂತ ಶಾರ್ಟ್‌ಕಟ್‌ಗಳಿಗೆ ಆದ್ಯತೆ ಸಿಗುತ್ತದೆ. ಇಂದು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎಂದು ನಿರಾಶರಾಗಿರುವುದು ಸಹಜ. ಇಂತಹ ಪರಿಸ್ಥಿತಿ ಮತ್ತೆ ಎಂದಿಗೂ ಬರದಂತೆ ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಅವರು ಹೇಳಿದ್ದಾರೆ.

'ಯುವ ಭಾರತದ ಕನಸುಗಳನ್ನು ಕಾಪಾಡಬೇಕು'

"ಯುವ ಭಾರತ ಕನಸುಗಳು ಮತ್ತು ಶಕ್ತಿಯಿಂದ ತುಂಬಿದೆ. ಅವರೇ ದೇಶದ ಯಶಸ್ಸಿನ ಇಂಧನ. ಪೋಷಕರು, ಶಿಕ್ಷಕರು, ಸ್ನೇಹಿತರು, ಸಂಬಂಧಿಕರು, ಶಾಲೆಗಳು ಹಾಗೂ ಆಡಳಿತ ವ್ಯವಸ್ಥೆ – ಎಲ್ಲರಿಗೂ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಇದೆ" ಎಂದು ಸಚಿನ್ ಹೇಳಿದ್ದಾರೆ.

'ಪ್ರಾಮಾಣಿಕತೆಗೆ ಗೌರವ, ಅರ್ಹತೆಗೆ ಜಯ ಸಿಗಲಿ'

"ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ, ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ಮತ್ತು ಅರ್ಹತೆ ಗೆಲ್ಲುವ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕು. ನಮ್ಮ ಮಕ್ಕಳ ಭವಿಷ್ಯವನ್ನು ಬಲಪಡಿಸುವ ಹಾಗೂ ಅವರ ಕನಸುಗಳನ್ನು ರಕ್ಷಿಸುವ ಪರಿಹಾರಗಳನ್ನು ನಾವು ಕಂಡುಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ. ಜಯ ಹಿಂದ್," ಎಂದು ಸಚಿನ್ ತಮ್ಮ ಸಂದೇಶವನ್ನು ಕೊನೆಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com