

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಬೆಂಬಲ ವ್ಯಕ್ತಪಡಿಸಿ ಜಂತರ್ ಮಂತರ್ ನ ಪ್ರತಿಭಟನಾ ವೇದಿಕೆಯಲ್ಲಿ ಉತ್ತರಾಖಂಡದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಶುಕ್ರವಾರ ತಮ್ಮ ಹುದ್ದೆಗೆ "ರಾಜೀನಾಮೆ" ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಆದರೆ ಅಸಲಿ ವಿಷಯ ಏನಂದ್ರೆ, ಆ ಕಾನ್ಸ್ಟೇಬಲ್ ಈಗಾಗಲೇ ಅಮಾನತುಗೊಂಡಿದ್ದರು ಎಂದು ಉತ್ತರಾಖಂಡ ಪೊಲೀಸರು ತಿಳಿಸಿದ್ದಾರೆ.
"ಇದು ಭಗತ್ ಸಿಂಗ್ ಅವರ ದೇಶ. ಬಾಂಬ್ ಅಥವಾ ಪಿಸ್ತೂಲ್ಗಳ ಮೂಲಕ ಕ್ರಾಂತಿಯಾಗುವುದಿಲ್ಲ. ವಿಚಾರಗಳಿಂದ ಕ್ರಾಂತಿ ಆಗುತ್ತದೆ. ವಿಚಾರಗಳು ಎಂದಿಗೂ ಸಾಯುವುದಿಲ್ಲ," ಎಂದು ಹೇಳುತ್ತಾ ಅವರು ತಮ್ಮ ಬ್ಯಾಡ್ಜ್ ಅನ್ನು ತೆಗೆದು 'ಕಾಕ್ರೋಚ್ ಜನತಾ ಪಾರ್ಟಿ'ಯ ಸ್ಥಾಪಕ ಅಭಿಜೀತ್ ಡಿಪ್ಕೆ ಅವರಿಗೆ ಹಸ್ತಾಂತರಿಸುವ ಮೂಲಕ ಕಾನ್ಸ್ಟೇಬಲ್ ಶೇರ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
ಅಲ್ಲದೇ, 'ಪಟ್ವಾರಿ' ಹುದ್ದೆಯ ಪ್ರಶ್ನೆಪತ್ರಿಕೆ ದಿನಸಿ ಅಂಗಡಿಗಳಲ್ಲಿಯೂ ಲಭ್ಯವಿತ್ತು ಎಂದು ಹೇಳುವ ಮೂಲಕ 2021 ರಲ್ಲಿ ಉತ್ತರಾಖಂಡದಲ್ಲಿ ನಡೆದಿದೆ ಎನ್ನಲಾದ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತಾದ ವರದಿಗಳನ್ನು ಅವರು ಪ್ರಸ್ತಾಪಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಇನ್ಸ್ಪೆಕ್ಟರ್ ಜನರಲ್ ನಿವೇದಿತಾ ಕುಕ್ರೇತಿ, ಪಿತೋರಗಢದಲ್ಲಿ ನಿಯೋಜಿತರಾಗಿದ್ದ ಕಾನ್ಸ್ಟೇಬಲ್ ಜೂನ್ 28 ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ಜುಲೈ 20 ರಂದು ಅವರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ವಿವರಣೆ ಕೋರಿ ಪಿತೋರಗಢದ ಪೊಲೀಸ್ ವರಿಷ್ಠಾಧಿಕಾರಿಗಳು (SP) ನೋಟಿಸ್ ನೀಡಿದ್ದರು. ಅವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಭೂ ಒತ್ತುವರಿ ಆರೋಪ ಹಾಗೂ ಗ್ಯಾಂಗ್ಸ್ಟರ್ ಪ್ರವೀಣ್ ವಾಲ್ಮೀಕಿ ನಡೆಸಿದ ಸಂಘಟಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇಲೆ, ಕಳೆದ ವರ್ಷ ಹರಿದ್ವಾರದಲ್ಲಿ ದಾಖಲಾದ ಎಫ್ಐಆರ್ (FIR) ಆಧಾರದ ಮೇಲೆ ಅವರನ್ನು ಸೆಪ್ಟೆಂಬರ್ 15 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ತಿಂಗಳುಗಳ ಕಾಲ ಜೈಲುವಾಸದ ನಂತರ ಅವರಿಗೆ ಜಾಮೀನು ದೊರೆತಿತ್ತು. ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ವಂಚನೆ, ದಾಖಲೆಗಳ ನಕಲು (ಫೋರ್ಜರಿ) ಮತ್ತು ಅಪರಾಧ ಸಂಚು ರೂಪಿಸಿದ ಆರೋಪದಡಿ ಹರಿದ್ವಾರದ ಗಂಗನಹರ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 28, 2025 ರಂದು ದಾಖಲಾದ ಎಫ್ಐಆರ್ ಆಧಾರದ ಮೇಲೆ ಅವರನ್ನು ಎಸ್ಟಿಎಫ್(STF) ಬಂಧಿಸಿತ್ತು. ಅಮಾನತು ಪ್ರಕ್ರಿಯೆ ನಡೆಯುತಿತ್ತು. ಅವರು ನಿಯೋಜನೆಗೊಂಡಿದ್ದ ಪೊಲೀಸ್ ಠಾಣೆಯಿಂದ ಅನಧಿಕೃತ ರಜೆಯ ಮೇಲೆ ತೆರಳಿದ್ದರು ಎಂದು ಅವರು ಹೇಳಿದರು.