

ಹೈದರಾಬಾದ್: ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗೊಲ್ಲಪಲ್ಲಿ ಗ್ರಾಮದ 25 ವರ್ಷದ ಪೇಂಟರ್ ತನ್ನ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭಯಾನಕ ಹೆಜ್ಜೆ ಇಡುವ ಮೊದಲು ಪೇಂಟರ್ ಜನಗಣತಿ ನಮೂನೆಯಲ್ಲಿ ಆತ್ಮಹತ್ಯೆ ಪತ್ರ ಬರೆದು, ಪ್ರಧಾನಿ ಮೋದಿಯನ್ನು ತನ್ನ ಸಾವಿಗೆ ದೂಷಿಸಿದ್ದಾರೆ. ಆತ್ಮಹತ್ಯಾ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ತನ್ನ ಸಾವಿಗೆ ಕಾರಣ ಎಂದು ಬರೆದುಕೊಂಡಿದ್ದು ಅಲ್ಲದೆ 25 ವರ್ಷದ ವಂಶಿ ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಈ ಟಿಪ್ಪಣಿಯ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಅವರು ಮೃತರ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪೊಲೀಸರ ಪ್ರಕಾರ, ವಂಶಿ 12ನೇ ತರಗತಿಯವರೆಗೆ ಓದಿದ್ದು ನಂತರ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದನು. ಗುರುವಾರ ಬೆಳಿಗ್ಗೆ ವಂಶಿ ತಂದೆ ಬಾಲಯ್ಯ ಸೀಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿರುವ ಶವವನ್ನು ಕಂಡು ಆತಂಕಗೊಂಡರು. ಬುಧವಾರ ಸಂಜೆ ವಂಶಿ ಅವರ ತಾಯಿ ಭಾರತಿ ಅವರೊಂದಿಗೆ ಕೌಟುಂಬಿಕ ವಿಷಯಗಳಿಗಾಗಿ ಜಗಳವಾಡಿದ್ದನು ಎಂದು ಬಾಲಯ್ಯ ಹೇಳಿದರು. ಜಗಳವಾದ ನಂತರ ಆತ ಸಂಜೆ 6 ಗಂಟೆಗೆ ಮನೆಯಿಂದ ಹೊರಟು ರಾತ್ರಿ 10 ಗಂಟೆ ಸುಮಾರಿಗೆ ಹಿಂತಿರುಗಿದನು. ಅವರು ಊಟ ಮಾಡಿ ತಮ್ಮ ಕೋಣೆಯಲ್ಲಿ ಮಲಗಲು ಹೋದನು. ನಂತರ ನೋಡಿದರೇ ಆತನ ದೇಹ ಫ್ಯಾನ್ ರಾಡ್ ನಲ್ಲಿ ನೇತಾಡುತ್ತಿತ್ತು ಎಂದು ಹೇಳಿದರು.
ಗ್ರಾಮಸ್ಥರು ಘಟನೆಯ ಬಗ್ಗೆ ಯೆಲ್ಲಾ ರೆಡ್ಡಿಪೇಟೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಅವರ ಕೋಣೆಯಲ್ಲಿ ಖಾಲಿ ಜನಗಣತಿ ನಮೂನೆಯಲ್ಲಿ ಬರೆದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಅದಕ್ಕೆ ವಂಶಿ ಸಹಿ ಮಾಡಿದ್ದು ಆತ್ಮಹತ್ಯೆ ಪತ್ರವನ್ನು ತೆಲುಗು ಭಾಷೆಯಲ್ಲಿ ಬರೆಯಲಾಗಿದೆ. ಆತ್ಮಹತ್ಯೆ ಪತ್ರದಲ್ಲಿ, ವಂಶಿ ಹೀಗೆ ಬರೆದಿದ್ದಾರೆ, "ಗೌರವಾನ್ವಿತ ಪೊಲೀಸರೇ, ನನ್ನ ಪರಿಸ್ಥಿತಿಯನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನನ್ನ ಸಾವಿಗೆ ಕಾರಣ. ದಯವಿಟ್ಟು ನನ್ನ ಕುಟುಂಬಕ್ಕೆ ಕಿರುಕುಳ ನೀಡಬೇಡಿ ಎಂದು ಬರೆದುಕೊಂಡಿದ್ದಾರೆ.
ವಂಶಿ ತನ್ನ ಫೋನ್ ಅನ್ನು ತನ್ನ ಕೋಣೆಯ ಕಪಾಟಿನಲ್ಲಿ ಇಟ್ಟಿದ್ದನು. ಗುರುವಾರ ಬೆಳಿಗ್ಗೆ ಹುಡುಕಾಟದ ಸಮಯದಲ್ಲಿ ನಮ್ಮ ತಂಡವು ಫೋನ್ ಅನ್ನು ಪತ್ತೆ ಮಾಡಿದರು. ತನ್ನ ಕುಡಿತದ ಅಭ್ಯಾಸದ ಬಗ್ಗೆ ತನ್ನ ತಾಯಿಯೊಂದಿಗೆ ಜಗಳವಾಡಿದ ನಂತರ, ವಂಶಿ ಸ್ನೇಹಿತನೊಂದಿಗೆ ಮದ್ಯಪಾನ ಮಾಡುತ್ತಿದ್ದನು. ಕೌಟುಂಬಿಕ ವಿವಾದಗಳೇ ಅವನ ಆತ್ಮಹತ್ಯೆಗೆ ಕಾರಣ ಎಂದು ನಾವು ಅನುಮಾನಿಸುತ್ತೇವೆ. ಜನಗಣತಿ ನಮೂನೆಯಲ್ಲಿ ಅವನು ಅಂತಹ ಆತ್ಮಹತ್ಯೆ ಪತ್ರವನ್ನು ಏಕೆ ಬರೆದಿದ್ದಾನೆಂದು ಕುಟುಂಬಕ್ಕೆ ತಿಳಿದಿಲ್ಲ. ಅವನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿದರು.