

ನವದೆಹಲಿ: ದೇಶಾದ್ಯಂತ NEET ಪ್ರಶ್ನೆ ಪತ್ರಿಕೆ ಲೀಕ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ Cockroach Janata Party ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಜುಲೈ 22 ಮತ್ತು 23 ರಂದು ಜಂತರ್ ಮಂತರ್ ಬಳಿ CJP ಕಾರ್ಯಕರ್ತರು ಅನಿರ್ದಿಷ್ಟ ಅವಧಿಯ ಧರಣಿ ಆರಂಭಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ದೆಹಲಿ ಮೆಟ್ರೋ ರೈಲು ನಿಗಮ DMRC ಇಂದು ಬೆಳಿಗ್ಗೆ 7:30 ರಿಂದ ದೆಹಲಿಯ 18 ಪ್ರಮುಖ ಮೆಟ್ರೋ ನಿಲ್ದಾಣವನ್ನ ಮುಚ್ಚಿದೆ. ಆ ಕುರಿತ ವರದಿ ಇಲ್ಲಿದೆ:
ಇನ್ನೂ, ಪ್ರತಿಭಟನೆಯ ಭಾಗವಾಗಿ, ಇಂದು CJP ಬೆಂಬಲಿಗರು, ಪ್ರತಿಭಟನಾಕಾರರು ಮತ್ತು ಭಾರಿ ಜನಸಮೂಹವು ಜುಲೈ 20ರಂತೆ ಸೆಂಟ್ರಲ್ ದೆಹಲಿಯ ಪ್ರಮುಖ ಸರ್ಕಾರಿ ಕಚೇರಿಗಳು ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ನುಗ್ಗದಂತೆ ತಡೆಯಲು ದೆಹಲಿ ಪೊಲೀಸರ ಸೂಚನೆಯ ಮೇರೆಗೆ Delhi Metro Rail Corporation (DMRC) ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಯಾವ 18 ನಿಲ್ದಾಣ ಬಂದ್?
ಲೋಕ ಕಲ್ಯಾಣ್ ಮಾರ್ಗ, ರಾಜೀವ್ ಚೌಕ್, ಪಟೇಲ್ ಚೌಕ್, ರಾಮಕೃಷ್ಣ ಆಶ್ರಮ ಮಾರ್ಗ, ಬಾರಾಖಂಬಾ ರಸ್ತೆ, ಸುಪ್ರೀಂ ಕೋರ್ಟ್, ಸೇವಾ ತೀರ್ಥ, ಜನಪಥ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟರಿಯೇಟ್, ಐಟಿಒ, ದೆಹಲಿ ಗೇಟ್, ಇಂದ್ರಪ್ರಸ್ಥ, ಖಾನ್ ಮಾರುಕಟ್ಟೆ, ಜೋರ್ ಬಾಗ್, ಶಿವಾಜಿ ಕ್ರೀಡಾಂಗಣ, ಝಂಡೆವಾಲನ್ ಮುಚ್ಚಲ್ಪಡುತ್ತವೆ.
ಈ ಎಲ್ಲಾ ನಿಲ್ದಾಣಗಳು ಮಧ್ಯ ದೆಹಲಿಯ ಅತಿ ಜನದಟ್ಟಣೆಯ ಪ್ರದೇಶಗಳಾಗಿವೆ. ಕಚೇರಿಗಳು, ನ್ಯಾಯಾಲಯಗಳು ಮತ್ತು ಮಾರುಕಟ್ಟೆಗಳಿಗೆ ಹೋಗುವ ಸಾವಿರಾರು ಜನರು ಪ್ರತಿದಿನ ಈ ಮಾರ್ಗ ಬಳಸುತ್ತಾರೆ. ಆದ್ರೆ, ಜನರಿಗೆ ಅನುಕೂಲವಾಗುವಂತೆ ಕೆಲವು ಕಡೆ ಇಂಟರ್ಚೇಂಜ್ ಸೌಲಭ್ಯ ನೀಡಲಾಗಿದೆ.
ಇಂಟರ್ಚೇಂಜ್ ಸೌಲಭ್ಯ ಎಲ್ಲೆಲ್ಲಿ ಲಭ್ಯ?
ಮೆಟ್ರೋ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳದಂತೆ ಮತ್ತು ವಿವಿಧ ಲೈನ್ಗಳ ನಡುವೆ ಸಂಪರ್ಕ ಕಲ್ಪಿಸಲು ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್ ನಲ್ಲಿ ಇಂಟರ್ಚೇಂಜ್ ಸೌಲಭ್ಯ ನೀಡಿದೆ. ಅಂದರೆ, ಈ ಮೂರು ನಿಲ್ದಾಣಗಳ ಒಳಗೆ ಬರಲು ಅಥವಾ ನಿಲ್ದಾಣದಿಂದ ಹೊರಗೆ ಹೋಗಲು ಸಾರ್ವಜನಿಕರಿಗೆ ಯಾವುದೇ ಅವಕಾಶವಿರುವುದಿಲ್ಲ. ಗೇಟ್ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಕೇವಲ ಒಂದು ರೈಲಿನಿಂದ ಮತ್ತೊಂದು ರೈಲಿಗೆ ಬದಲಾಯಿಸಲು ಮಾತ್ರ ಒಳಗಿನ ಸೌಲಭ್ಯ ಮುಕ್ತವಾಗಿರುತ್ತದೆ.
ಮುಂದುವರೆದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ DMRC ಕ್ಷಮೆಯಾಚಿಸಿದೆ ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸುವಂತೆ ಹೇಳಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಪೊಲೀಸರು ಮುಚ್ಚಿದ ನಿಲ್ದಾಣಗಳು ಮತ್ತು ಪ್ರತಿಭಟನಾ ಸ್ಥಳಗಳ ಸುತ್ತಲೂ ಭದ್ರತೆ ಹೆಚ್ಚಿಸುವ ನಿರೀಕ್ಷೆಯಿದೆ.