

ವಯನಾಡು: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸ್ವಾಗತಿಸಿದ್ದು, ಜನರು ತಮ್ಮ ದೇಶವನ್ನು ಮರಳಿ ಪಡೆಯಲು" ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ ನಡೆದ NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.
ವಯನಾಡುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ದೇಶವ್ಯಾಪಿ ನಡೆದ ಪ್ರತಿಭಟನೆಗಳಲ್ಲಿ ಲೋಕಸಭೆ ವಿಪಕ್ಷ ನಾಯಕ ಹಾಗೂ ತಮ್ಮ ಸಹೋದರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ವಹಿಸಿದ ಪಾತ್ರವನ್ನು ಶ್ಲಾಘಿಸಿದರು.
"ನನಗೆ ಅನೇಕ ಕಾರಣಗಳಿಂದ ಸಂತೋಷವಾಗಿದೆ. ಆದರೆ ಮುಖ್ಯ ಕಾರಣವೇನೆಂದರೆ, ಇಂದು - ಜುಲೈ 25, 2026 - ನಮ್ಮ ದೇಶದ ಜನರು, ಸಂವಿಧಾನವನ್ನು ನಾಶಮಾಡಲು ಮತ್ತು ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದವರಿಂದ ತಮ್ಮ ದೇಶವನ್ನು ಮರಳಿ ಪಡೆಯಲು ಪ್ರಾರಂಭಿಸಿದ ದಿನವಾಗಿದೆ. ಇದು ಭಾರತದ ಯುವಜನತೆಯ ಗೆಲುವು. ಅಲ್ಲಿ ನಿಂತ ಪ್ರತಿಯೊಬ್ಬರ ಬಗ್ಗೆಯೂ ನನಗೆ ಹೆಮ್ಮೆ ಇದೆ. ಮಹಾತ್ಮ ಗಾಂಧಿಯವರು ನಮಗೆ ಕಲಿಸಿದ ರೀತಿಯಲ್ಲೇ ಅವರು ಇದನ್ನು ಸಾಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದು ದೇಶದ ಪ್ರತಿಯೊಬ್ಬ ಆಡಳಿತಗಾರನಿಗೂ ಒಂದು ಪಾಠ. ನೀವು ಜನರ ಇಚ್ಛೆಗೆ ಕಿವಿಗೊಡಲೇಬೇಕು. ಜನರ ಇಚ್ಛೆಯೇ ಸರ್ವೋಚ್ಚ, ಅದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಭಾರತೀಯ ಜನರ ಇಚ್ಛೆಯನ್ನು ತಡೆಯಲು ಯಾವುದೇ ಒಬ್ಬ ನಾಯಕನಿಗೆ, ಸರ್ವಾಧಿಕಾರಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ದೇಶಾದ್ಯಂತ ನಡೆದ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಪಕ್ಷ ಹಾಗೂ ಅದರ ವಿದ್ಯಾರ್ಥಿ,. ಯುವ ಘಟಕಗಳನ್ನು ಮುನ್ನಡೆಸಿದರು. ಕಾಂಗ್ರೆಸ್ ಪಕ್ಷದಲ್ಲಿರುವ ನಾವು ಅವರಿಗೆ ಸಾಧ್ಯವಾದಷ್ಟು ಬಲವಾದ ರೀತಿಯಲ್ಲಿ ಬೆಂಬಲ ನೀಡಲು ನಮ್ಮ ಕೈಲಾದ ಪ್ರಯತ್ನವನ್ನು ಮಾಡಿದ್ದೇವೆ. ರಾಹುಲ್ ಗಾಂಧಿ ಅವರು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಸುಧಾರಣೆಗಳ ವಿಷಯದ ಬಗ್ಗೆ ಬಹಳ ಹಿಂದಿನಿಂದಲೂ ಮಾತನಾಡುತ್ತಾ ಬಂದಿದ್ದಾರೆ. ಅವರು ಈ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ಪಕ್ಷದ ಇತರರು, ಎನ್ಎಸ್ಯುಐ (NSUI) ಹಾಗೂ ಯುವ ಕಾಂಗ್ರೆಸ್ ಸದಸ್ಯರನ್ನು ಬೆಂಬಲಿಸಿದ್ದು ಮಾತ್ರವಲ್ಲದೇ, ವಿದ್ಯಾರ್ಥಿಗಳ ಹಕ್ಕುಗಳು ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ದೇಶಾದ್ಯಂತ ಚಳುವಳಿಯನ್ನು ರೂಪಿಸಲು ಸ್ಫೂರ್ತಿ ನೀಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸಲು ಬಯಸುತ್ತೇನೆ ಎಂದರು.
ಇದಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ವಿಶ್ವವಿದ್ಯಾಲಯಗಳಲ್ಲಿ ತನ್ನವರಿಗೆ ಪ್ರಮುಖ ಹುದ್ದೆಗಳನ್ನು ನೀಡಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.
ಇದು ಕೇವಲ ಆರಂಭ ಎಂದು ನಾನು ನಂಬುತ್ತೇನೆ, ಆದರೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಈ ಸುದ್ದಿಯನ್ನು ಕೇಳಿದಾಗ ನಾನು ಸ್ವಲ್ಪ ಭಾವುಕಳಾದೆ, ಏಕೆಂದರೆ ಕಳೆದ 10 ಅಥವಾ 12 ವರ್ಷಗಳಲ್ಲಿ ಅನೇಕ ಬಾರಿ ನಾನು ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ: ನಮ್ಮ ಯುವಜನರು ಯಾವಾಗ ಎಚ್ಚರಗೊಳ್ಳುತ್ತಾರೆ? ನಮ್ಮ ದೇಶಕ್ಕೆ ಏನು ಮಾಡಲಾಗುತ್ತಿದೆ ಎಂಬುದನ್ನು ನೋಡಿ. ಆರ್ಎಸ್ಎಸ್ ಇಡೀ ಶಿಕ್ಷಣ ವ್ಯವಸ್ಥೆಯನ್ನು, ಪ್ರತಿಯೊಂದು ಹುದ್ದೆಯನ್ನು ಮತ್ತು ಪ್ರತಿಯೊಂದು ಕುಲಪತಿ ಹುದ್ದೆಯನ್ನು ತನ್ನವರಿಗೆ ತುಂಬುತ್ತಿದೆ.
ನಮ್ಮ ಪೂರ್ವಜರ ಸಿದ್ಧಾಂತವನ್ನು ದುರ್ಬಲಗೊಳಿಸಲಾಗುತ್ತಿದೆ. ಯುವಜನರ ವಿರುದ್ಧ ಮತ್ತು ಪ್ರತಿಭಟನೆಯ ಧ್ವನಿ ಎತ್ತುವ ಯಾರ ವಿರುದ್ಧವಾದರೂ ಬಲಪ್ರಯೋಗ ಮಾಡಲಾಗುತ್ತಿದೆ. ಇಂದು ನಾನು ತುಂಬಾ ಸಂತೋಷವಾಗಿದ್ದೇನೆ ಏಕೆಂದರೆ ನಮ್ಮ ದೇಶದ ಯುವಜನರು ತಮ್ಮ ಧ್ವನಿಯನ್ನು ಎತ್ತಿದ್ದಾರೆ ಮತ್ತು ಅವರ ಧ್ವನಿಯನ್ನು ಅಡಗಿಸಲು ಇನ್ನು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಹೇಳಿದರು.