

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಸಂಭ್ರಮಾಚರಣೆ ವೇಳೆ ದೆಹಲಿ ದಂಗೆ ಮಾಸ್ಟರ್ ಮೈಂಡ್, ಸದ್ಯ ಜೈಲಿನಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ನನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. 2020ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಖಾಲಿದ್ ನನ್ನು ಬಂಧಿಸಲಾಗಿದೆ.
ನೀಟ್ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ 'ಕಾಕ್ರೋಚ್ ಜನತಾ ಪಕ್ಷ' ನೇತೃತ್ವದಲ್ಲಿ ದೇಶಾದ್ಯಂತ ನಡೆದ ಪ್ರತಿಭಟನೆಗಳು ನಡೆದಿದ್ದವು. ಗೋವಾದ ಆಜಾದ್ ಮೈದಾನದಲ್ಲಿ ಪ್ರಧಾನ್ ಅವರ ರಾಜೀನಾಮೆ ನಂತರ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆ ಡ್ಯಾನಿಶ್ ಎಂಬಾತ ಖಾಲಿದ್ ನನ್ನು ಬೆಂಬಲಿಸಿ ಫಲಕ ಪ್ರದರ್ಶಿಸಿದನು. ಖಾಲಿದ್ ಜೈಲಿನಿಂದ ಬಿಡುಗಡೆಯಾಗಬೇಕೆಂದು ಹೇಳಿದ್ದನು.
ಈ ವೇಳೆ ಪ್ರತಿಭಟನಾ ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಡ್ಯಾನಿಶ್ ನನ್ನು ಬಂಧಿಸಿದ್ದಾರೆ. ಯುವಕನ ಬಂಧನದ ನಂತರ, ಆಜಾದ್ ಮೈದಾನದಲ್ಲಿ ಜಮಾಯಿಸಿದ ಜನಸಮೂಹವು ಆತನ ಬಿಡುಗಡೆಗೆ ಒತ್ತಾಯಿಸಿ ಪೊಲೀಸ್ ಪ್ರಧಾನ ಕಚೇರಿಗೆ ಮೆರವಣಿಗೆ ನಡೆಸಿತು.
ಡ್ಯಾನಿಶ್ ನನ್ನು ಬೆಂಬಲಿಸಿ ಗುಂಪು ಘೋಷಣೆಗಳನ್ನು ಕೂಗುತ್ತಿದ್ದಾಗ, ಪೊಲೀಸರು ಸುದಿನ್ ದಳವಿ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತ ಕೂಡ ಖಾಲಿದ್ ಅವರನ್ನು ಬೆಂಬಲಿಸಿದ್ದ ಮತ್ತು ಮಾಧ್ಯಮ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ ಎನ್ನಲಾಗಿದೆ. ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಏತನ್ಮಧ್ಯೆ, ಇಬ್ಬರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ಜನತಾ ಯುವ ಮೋರ್ಚಾ (BJYM) ನಾಯಕರು ಪಣಜಿ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ರಾಷ್ಟ್ರ ದ್ರೋಹಿ ವ್ಯಕ್ತಿಯನ್ನು ಬೆಂಬಲಿಸಿದ್ದಕ್ಕಾಗಿ ಪೊಲೀಸರು ಅವರ ಮೇಲೆ ಜಾಮೀನು ರಹಿತ ಅಪರಾಧಗಳನ್ನು ಹೊರಿಸಬೇಕೆಂದು ಬಿಜೆವೈಎಂ ಗೋವಾ ಅಧ್ಯಕ್ಷ ತುಷಾರ್ ಕೇಲ್ಕರ್ ಒತ್ತಾಯಿಸಿದರು.