

ರಾಜ್ ಕೋಟ್: 194 ಪ್ರಯಾಣಿಕರಿದ್ದ ದುಬೈ-ಮುಂಬೈ ವಿಮಾನ ರಾಜ್ಕೋಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಸೋಮವಾರ ನಡೆದಿದೆ.ವಿಮಾನದ ಕಾರ್ಗೋ ಭಾಗದಲ್ಲಿ ಹೊಣೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುಜರಾತ್ನ ರಾಜ್ಕೋಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ದುಬೈನಿಂದ ಮುಂಬೈಗೆ ತೆರಳುತ್ತಿದ್ದ 1452 ಇಂಡಿಗೋ ವಿಮಾನದಲ್ಲಿ 194 ಮಂದಿ ಪ್ರಯಾಣಿಕರಿದ್ದರು. ವಿಮಾನದ ಕಾರ್ಗೋವಿಭಾಗದಲ್ಲಿ ಹೊಗೆ ಕಂಡುಬಂದಿದ್ದರಿಂದ ಅದನ್ನು ರಾಜ್ಕೋಟ್ ಕಡೆಗೆ ತಿರುಗಿಸಲಾಯಿತು ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಮಾಹಿತಿ ದೊರೆತ ನಂತರ ಮಧ್ಯಾಹ್ನ 2.45ಕ್ಕೆ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ವಿಮಾನವು ಮಧ್ಯಾಹ್ನ 3.27ಕ್ಕೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು ಎಂದು ಹೇಳಲಾಗಿದೆ.
ಎಲ್ಲಾ ಪ್ರಯಾಣಿಕರನ್ನು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಇದೇ ವೇಳೆ ಹೊಗೆ ಕಾಣಿಸಿಕೊಳ್ಳಲು ಕಾರಣ ಪತ್ತೆಹಚ್ಚಲು ತಂತ್ರಜ್ಞರು ವಿಮಾನವನ್ನು ಪರಿಶೀಲಿಸಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಪಿ. ತರೇಟಿಯಾ ಅವರು ಮಾತನಾಡಿ, ವಿಮಾನದ ಕಾರ್ಗೋ ಭಾಗದಲ್ಲಿ ಹೊಗೆಯಿರುವುದನ್ನು ಪತ್ತೆಹಚ್ಚಿದ ಪೈಲಟ್ಗಳು ATC ಅನುಮತಿ ಪಡೆದು ರಾಜ್ ಕೋಟ್ ನಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
ಎಲ್ಲಾ ಪ್ರಯಾಣಿಕರು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿದು, ವಿಮಾನ ನಿಲ್ದಾಣದ ಟರ್ಮಿನಲ್ನೊಳಗಿನ ನಿಗದಿತ ಪ್ರದೇಶಕ್ಕೆ ತೆರಳಿದರು. ವಿಮಾನಯಾನ ಸಂಸ್ಥೆಯ ತಾಂತ್ರಿಕ ತಂಡವು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಿಮಾನವನ್ನು ಪರಿಶೀಲಿಸುತ್ತಿದೆ. ವಿಮಾನದಲ್ಲಿ ಯಾವುದೇ ಬೆಂಕಿ ಕಾಣಿಸಿಕೊಂಡಿರಲಿಲ್ಲ ಎಂದು ಅಧಿಕಾರಿ ತಿಳಿಸಿದರು.