

ದೆಹಲಿ: ವಿಶಾಖಪಟ್ಟಣಂನಿಂದ ಶನಿವಾರ ದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಂಜಿನ್ ವೈಫಲ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ 'ಪೂರ್ಣ ತುರ್ತು ಪರಿಸ್ಥಿತಿ' ಘೋಷಿಸಲಾಯಿತು.
ವಿಮಾನ ನಿಲ್ದಾಣದ ರನ್ವೇ 28ರಲ್ಲಿ ಹೈ ಅಲರ್ಟ್ ಘೋಷಿಸಿ, ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಅದೃಷ್ಟವಶಾತ್, 161 ಪ್ರಯಾಣಿಕರನ್ನು ಹೊತ್ತಿದ್ದ ಈ ಬೋಯಿಂಗ್ 737-800 ವಿಮಾನವು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರನ್ನು ಯಾವುದೇ ತೊಂದರೆಯಿಲ್ಲದೆ ವಿಮಾನದಿಂದ ಹೊರತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಅಗ್ನಿಶಾಮಕದಳ ಅಧಿಕಾರಿಗಳ ಪ್ರಕಾರ, ಬೆಳಿಗ್ಗೆ 10.53ಕ್ಕೆ ವಿಮಾನ ತುರ್ತು ಭೂಸ್ಪರ್ಶವಾದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಮತ್ತು ಪ್ರಯಾಣಿಕರೆಲ್ಲರೂ ಕ್ಷೇಮವಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
Advertisement