NEET ಪರೀಕ್ಷೆ ಆನ್‌ಲೈನ್‌ಗೆ ಶಿಫ್ಟ್? ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್? ನೀಲೇಕಣಿ ಸಮಿತಿ ವರದಿಯತ್ತ ಎಲ್ಲರ ಚಿತ್ತ

ಸೈಬರ್ ಭದ್ರತೆ, ಡೇಟಾಬೇಸ್ ರಕ್ಷಣೆ ಸೇರಿದಂತೆ ಕೆಲವು ಹೆಚ್ಚುವರಿ ಸುರಕ್ಷತಾ ಕ್ರಮಗಳು ಅಗತ್ಯ. ಈ ವಿಷಯದಲ್ಲಿ ಸಾಂಪ್ರದಾಯಿಕ ಚಿಂತನೆಯಾಚೆಗೆ ಹೋಗಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ..
Supreme Court
ಸುಪ್ರೀಂ ಕೋರ್ಟ್ online desk
Updated on

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ NEET ಅನ್ನು ಆನ್‌ಲೈನ್ ಮೂಲಕ ನಡೆಸುವ ಕುರಿತು ಕೇಂದ್ರ ಸರ್ಕಾರ ರಚಿಸಿರುವ ನಂದನ್ ನೀಲೇಕಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಯ ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠ, ಭೌತಿಕ (ಆಫ್‌ಲೈನ್) ಪರೀಕ್ಷಾ ಪದ್ಧತಿಯಿಂದ ಆನ್‌ಲೈನ್ ಪರೀಕ್ಷೆಗೆ ಬದಲಾವಣೆ ಮಾಡುವ ಸಂದರ್ಭದಲ್ಲಿ ಹೊಸ ಹಾಗೂ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

"ಸೈಬರ್ ಭದ್ರತೆ, ಡೇಟಾಬೇಸ್ ರಕ್ಷಣೆ ಸೇರಿದಂತೆ ಕೆಲವು ಹೆಚ್ಚುವರಿ ಸುರಕ್ಷತಾ ಕ್ರಮಗಳು ಅಗತ್ಯ. ಈ ವಿಷಯದಲ್ಲಿ ಸಾಂಪ್ರದಾಯಿಕ ಚಿಂತನೆಯಾಚೆಗೆ ಹೋಗಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ" ಎಂದು ನ್ಯಾಯಪೀಠ ಹೇಳಿತು.

Supreme Court
NEET protests: 'ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು'; ನಾಳೆ ಪೊಲೀಸ್ ದೌರ್ಜನ್ಯ ಅರ್ಜಿಗಳ ವಿಚಾರಣೆ: ಸುಪ್ರೀಂ ಕೋರ್ಟ್

ಆರ್‌ಜೆಡಿ ಸಂಸದರ ಅರ್ಜಿ ವಿಚಾರಣೆ

ಮೇ 3ರಂದು ನಡೆದ NEET-UG 2026 ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್‌ಜೆಡಿ ಸಂಸದ ಸುದಾಕರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

"ಪ್ರಧಾನಿ ಸ್ವತಃ ಈ ಸಮಿತಿಯ ರಚನೆಯನ್ನು ಘೋಷಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಜ್ಞ ನಂದನ್ ನೀಲೇಕಣಿ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ" ಎಂದು ಮೆಹ್ತಾ ಹೇಳಿದರು.

ಆಗಸ್ಟ್ 3ಕ್ಕೆ ಮುಂದಿನ ವಿಚಾರಣೆ

ಸುಧಾಕರ್ ಸಿಂಗ್ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಆಗಸ್ಟ್ 3 (ಸೋಮವಾರ)ಕ್ಕೆ ನಿಗದಿಪಡಿಸಿರುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ?

ಇನ್ಫೋಸಿಸ್ ಸಹ ಸಂಸ್ಫಾಪಕ ಹಾಗೂ ಆಧಾರ್ ಮುಖ್ಯಸ್ಥರಾಗಿದ್ದ ನಂದನ್ ನೀಲೇಕಣಿ ಈ ಕಾರ್ಯಪಡೆಯ ಮುಖ್ಯಸ್ಥರಾಗಿದ್ದು, ಉಳಿದಂತೆ ಈ ತಂಡದಲ್ಲಿ ಮಾಜಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಗುಪ್ತಚರ ದಳದ (IB) ಮಾಜಿ ನಿರ್ದೇಶಕ ತಪನ್ ಡೇಕಾ, ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಇದ್ದಾರೆ.

Supreme Court
ವಿಪಕ್ಷಗಳ ಪ್ರತಿಭಟನೆಯ ನಡುವೆ, ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಿಗ್ರಹ ತಿದ್ದುಪಡಿ ಮಸೂದೆ ಮಂಡನೆ

ಹಿನ್ನೆಲೆ ಏನು?

ಮೇ 3, 2026ರಂದು NEET-UG ಪರೀಕ್ಷೆ ನಡೆಯಿತು. ಮೇ 12ರಂದು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಪಡಿಸಿತು. ಜೂನ್ 21ರಂದು ಮರುಪರೀಕ್ಷೆ ನಡೆಸಲಾಯಿತು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಇದಕ್ಕೂ ಮುನ್ನ ಜೂನ್ 1ರಂದು, ಜೂನ್ 21ರಂದು ನಡೆಯಲಿದ್ದ ಮರುಪರೀಕ್ಷೆಯನ್ನು ಕಡ್ಡಾಯವಾಗಿ ಕಂಪ್ಯೂಟರ್ ಆಧಾರಿತ (CBT) ಮಾದರಿಯಲ್ಲಿ ನಡೆಸುವಂತೆ ನೀಡಿದ್ದ ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಕ್ಷಣದ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿತ್ತು.

ಈಗ ನಂದನ್ ನೀಲೇಕಣಿ ನೇತೃತ್ವದ ತಜ್ಞರ ಸಮಿತಿಯ ವರದಿ ಆಧರಿಸಿ ಭವಿಷ್ಯದಲ್ಲಿ NEET ಪರೀಕ್ಷೆಯನ್ನು ಆನ್‌ಲೈನ್ ಮಾದರಿಗೆ ಪರಿವರ್ತಿಸುವ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com