

ಲಖನೌ: ಅಯೋಧ್ಯೆಯ ಧನ್ನಿಪುರದಲ್ಲಿ ಭವ್ಯ ಬಾಬ್ರಿ ಮಸೀದಿ ನಿರ್ಮಿಸುವ ಯೋಜನೆಗೆ ಭಾರೀ ಹಿನ್ನಡೆಯಾಗಿದ್ದು, ಹಣದ ಕೊರತೆಯಿಂದ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಬೃಹತ್ ಯೋಜನೆಯನ್ನು ಕೈಬಿಟ್ಟಿದ್ದು, ಸಣ್ಣ ಮಸೀದಿ ನಿರ್ಮಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಅಯೋಧ್ಯೆಯ ಧನ್ನಿಪುರದಲ್ಲಿ ಸುಮಾರು 300 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಗೆ ಕೇವಲ 1.5 ಕೋಟಿ ದೇಣಿಗೆ ಸಂಗ್ರಹವಾಗಿದೆ. ಹೀಗಾಗಿ ಈಗ ಕೇವಲ 3 ಕೋಟಿ ರೂ. ವೆಚ್ಚದಲ್ಲಿ ಸಣ್ಣ ಮಸೀದಿ ನಿರ್ಮಿಸಲು ಟ್ರಸ್ಟ್ ನಿರ್ಧರಿಸಿದೆ.
ಮೂಲಗಳ ಪ್ರಕಾರ, ಮಸೀದಿ, ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡುಗೆಮನೆ ಮತ್ತು ಇತರ ಸಾರ್ವಜನಿಕ ಸೌಲಭ್ಯಗಳನ್ನು ಒಳಗೊಂಡಂತೆ ಇಡೀ ಯೋಜನೆಗೆ ಸುಮಾರು 300 ಕೋಟಿ ರೂ.ಗಳ ವೆಚ್ಚವಾಗಬಹುದು ಎಂದು ಟ್ರಸ್ಟ್ ಅಂದಾಜಿಸಿತ್ತು. ಆದರೆ ಇದುವರೆಗೆ ಕೇವಲ 1.5 ಕೋಟಿ ರೂ.ಗಳ ದೇಣಿಗೆ ಪಡೆದಿರುವುದರಿಂದ ಮಸೀದಿಯ ಗಾತ್ರವನ್ನು ಕಡಿಮೆ ಮಾಡಬೇಕಾಯಿತು. ಆಸ್ಪತ್ರೆ ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸುವ ಯೋಜನೆಯನ್ನು ಸಹ ಮುಂದೂಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಇದೀಗ ಕೇವಲ ಮಸೀದಿ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚವಾಗುವಂತೆ ಹೊಸ ಯೋಜನೆ ರೂಪಿಸಲಾಗಿದೆ. ಆಸ್ಪತ್ರೆ ಸೇರಿದಂತೆ ಇತರ ಸೌಲಭ್ಯಗಳ ನಿರ್ಮಾಣವನ್ನು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.