ಪ್ರತಿಭಟನಾನಿರತ ವಿದ್ಯಾರ್ಥಿ ವಿರುದ್ಧ ಪೆಲೆಟ್ ಗನ್ ಬಳಕೆ ವಿವಾದ; ಸಿಬ್ಬಂದಿಗಳ ಬೆನ್ನಿಗೆ ನಿಂತ CRPF ಮುಖ್ಯಸ್ಥ; ‘ನಿರ್ಭಯದಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ..!

ನೀವು ಯಾವುದೇ ಭಯವಿಲ್ಲದೆ ನಿಮ್ಮ ಕರ್ತವ್ಯವನ್ನು ಮುಂದುವರಿಸಿ. ಎಲ್ಲಿಯಾದರೂ ಜವಾಬ್ದಾರಿ ಅಥವಾ ಹೊಣೆಗಾರಿಕೆ ವಹಿಸಬೇಕಾದರೆ, ಅದನ್ನು ನಾನು ಮಹಾನಿರ್ದೇಶಕನಾಗಿ ವಹಿಸಿಕೊಳ್ಳುತ್ತೇನೆ.
Union Home Minister Amit Shah and CRPF Director General Gyanendra Pratap Singh
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಆರ್‌ಪಿಎಫ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್
Updated on

ನವದೆಹಲಿ: ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಕೆ ಪ್ರಕರಣ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು, ಸಿಬ್ಬಂದಿಗಳ ಬೆನ್ನಿಗೆ ನಿಂತಿದ್ದಾರೆ.

ಕರ್ತವ್ಯ ನಿರ್ವಹಿಸುವ ವೇಳೆ ಸಿಬ್ಬಂದಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹೊಣೆಗಾರಿಕೆಯನ್ನು ತಾವೇ ವಹಿಸಿಕೊಳ್ಳುವುದಾಗಿ ಹೇಳಿರುವ ಅವರು, "ಯಾವುದೇ ಭಯವಿಲ್ಲದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ" ಎಂದು ಸಿಬ್ಬಂದಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಸೋಮವಾರ ನಡೆದ ಸಿಆರ್‌ಪಿಎಫ್ ಹೂಡಿಕೆ (Investiture) ಸಮಾರಂಭದಲ್ಲಿ ಮಾತನಾಡಿದ ಅವರು, "ನಾನು ಸಿಆರ್‌ಪಿಎಫ್ ಮಹಾನಿರ್ದೇಶಕನಾಗಿ ನಿಮ್ಮ ಪ್ರತಿಯೊಬ್ಬರಿಗೂ ಭರವಸೆ ನೀಡಲು ಬಯಸುತ್ತೇನೆ. ಕಾರ್ಯಾಚರಣೆ ನಡೆಸುವ ಬೆಟಾಲಿಯನ್ ಆಗಿರಲಿ ಅಥವಾ ಕಾನೂನು ಸುವ್ಯವಸ್ಥೆ ಕಾಪಾಡುವ ಘಟಕವಾಗಿರಲಿ, ನೀವು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ವೇಳೆ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಹಾಗೂ ಕೈಗೊಳ್ಳುವ ಕ್ರಮಗಳ ಹೊಣೆಗಾರಿಕೆಯನ್ನು ನಾನು ಹೊರುತ್ತೇನೆ. ನೀವು ಯಾವುದೇ ಭಯವಿಲ್ಲದೆ ನಿಮ್ಮ ಕರ್ತವ್ಯವನ್ನು ಮುಂದುವರಿಸಿ. ಎಲ್ಲಿಯಾದರೂ ಜವಾಬ್ದಾರಿ ಅಥವಾ ಹೊಣೆಗಾರಿಕೆ ವಹಿಸಬೇಕಾದರೆ, ಅದನ್ನು ನಾನು ಮಹಾನಿರ್ದೇಶಕನಾಗಿ ವಹಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಜುಲೈ 20ರಂದು ಕಾಕ್‌ರೋಚ್ ಜನತಾ ಪಕ್ಷ (CJP) ನೇತೃತ್ವದಲ್ಲಿ ನಡೆದ ಸಂಸತ್ ಚಲೋ ಪ್ರತಿಭಟನೆಯ ವೇಳೆ ಜಂತರ್ ಮಂತರ್ ಹಾಗೂ ಮಧ್ಯ ದೆಹಲಿಯ ಇತರ ಭಾಗಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಸಿದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್‌ನ ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಕ್ರಮಗಳು ತೀವ್ರ ಪರಿಶೀಲನೆಗೆ ಒಳಗಾಗಿವೆ.

Union Home Minister Amit Shah and CRPF Director General Gyanendra Pratap Singh
ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ: ಗೃಹ ಸಚಿವ ಅಮಿತ್ ಶಾ ನೇರ ಹೊಣೆ- ರಾಹುಲ್ ಗಾಂಧಿ ಆರೋಪ!

ಇದಕ್ಕೂ ಕೆಲ ದಿನಗಳ ಹಿಂದೆ ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು, ಪ್ರತಿಭಟನೆಯ ವೇಳೆ ಆರ್‌ಎಎಫ್ ಸಿಬ್ಬಂದಿ ಕೈಗೊಂಡ ಕ್ರಮಗಳ ಬಗ್ಗೆ "ವೃತ್ತಿಪರ ಮಟ್ಟದ ಕಾರ್ಯಾಚರಣೆಯ ನಂತರದ ಮೌಲ್ಯಮಾಪನ" (Professional Post-Event Assessment) ನಡೆಸಲಾಗುವುದು ಎಂದು ತಿಳಿಸಿದ್ದರು.

ಗಲಭೆ ನಿಯಂತ್ರಣ, ಜನಸಮೂಹ ನಿರ್ವಹಣೆ ಹಾಗೂ ನಾಗರಿಕ ಅಶಾಂತಿಯನ್ನು ನಿಯಂತ್ರಿಸಲು ವಿಶೇಷ ತರಬೇತಿ ಪಡೆದಿರುವ ಆರ್‌ಎಎಫ್, ದೊಡ್ಡ ಪ್ರಮಾಣದ ಕಾರ್ಯಾಚರಣೆಗಳ ಬಳಿಕ ತನ್ನ ಪ್ರಮಾಣಿತ ಕಾರ್ಯವಿಧಾನದ (SOP) ಭಾಗವಾಗಿ ಇಂತಹ ಮೌಲ್ಯಮಾಪನಗಳನ್ನು ನಡೆಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.

ಈ ಪರಿಶೀಲನೆಯಲ್ಲಿ ಪೆಲೆಟ್ ಗನ್ ಬಳಸಲು ಕಾರಣವಾದ ಪರಿಸ್ಥಿತಿಗಳು, ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವಾದ ಬೆಳವಣಿಗೆಗಳು ಹಾಗೂ ಘಟನೆಗಳ ಸಂಪೂರ್ಣ ಕ್ರಮವನ್ನು ಪರಿಶೀಲಿಸಲಾಗುತ್ತದೆ. ಜೊತೆಗೆ, ಪೆಲೆಟ್ ಗನ್ ಬಳಕೆ ನಿಗದಿತ ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿತ್ತೇ ಎಂಬುದನ್ನೂ ತನಿಖೆ ವೇಳೆ ಪರಿಶೀಲಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com