

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದ ದಾಳಿಯ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಗಮನಕ್ಕೆ ತರಲಿದ್ದು, ಈ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ.
ಶನಿವಾರ ಸೋನಾರ್ಪುರದಲ್ಲಿ ಚುನಾವಣೋತ್ತರ ಹಿಂಸಾಚಾರದಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಅಭಿಷೇಕ್ ಬ್ಯಾನರ್ಜಿ ಮೇಲೆ ಇಟ್ಟಿಗೆ, ಕಲ್ಲು ಮತ್ತು ಮೊಟ್ಟೆಗಳಿಂದ ಹಲ್ಲೆ ನಡೆಸಲಾಗಿತ್ತು.
ಅಭಿಷೇಕ್ ಬ್ಯಾನರ್ಜಿ ಕಣ್ಣಿಗೆ ಗಾಯವಾಗಿದ್ದು, ಈ ಹಲ್ಲೆ ಬಿಜೆಪಿ ಪ್ರಾಯೋಜಿತ" ಮತ್ತು ಅವರ ಹತ್ಯೆಗೆ ನಡೆದ ಯತ್ನವಾಗಿದೆ. ಪೊಲೀಸರು ಸಾಕಷ್ಟು ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯನ್ನು ಪ್ರಶ್ನಿಸಿದ್ದಕ್ಕಾಗಿ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
"ನೀವು ಬಿಜೆಪಿಯವರನ್ನು ಬೆಂಬಲಿಸಿದರೆ, ದೇಶಭಕ್ತರು. ಅವರನ್ನು ಪ್ರಶ್ನಿಸಿದರೆ ಟಾರ್ಗೆಟ್ ಆಗ್ತೀರಾ. ನೀವು ಅವರೊಂದಿಗೆ ನಿಂತರೆ, ನಿಮ್ಮಗೆ ಎಲ್ಲವೂ ಸಿಗಲಿದೆ. ಆದರೆ ಅವರ ವಿರುದ್ಧ ನಿಂತರೆ,, ನಿಮ್ಮನ್ನು ಮೌನಗೊಳಿಸಲು ಪ್ರಯತ್ನಿಸುತ್ತಾರೆ" ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಕಾಶ್ ಗಯೇನ್, ಕಾಜಲ್ ದಾಸ್, ದೇಬಾಶಿಶ್ ದತ್ತ, ನಿರ್ಮಾಲ್ಯ ಸೇನ್ಗುಪ್ತಾ ಮತ್ತು ತಪನ್ ಮೈತಿ ಎಂಬ ಐದು ಜನರನ್ನು ಬಂಧಿಸಿ ಸೋಮವಾರ ಬರುಯಿಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಿಜೆಪಿ ದಾಳಿಯನ್ನು ಖಂಡಿಸಿದೆ ಆದರೆ ಇದು ಟಿಎಂಸಿ ವಿರುದ್ಧದ ಜನಾಕ್ರೋಶದ ಪ್ರತಿಬಿಂಬವಾಗಿದೆ ಎಂದು ಸಮರ್ಥಿಸಿಕೊಂಡಿದೆ.
ಮತ್ತೊಂದೆಡೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಸಚಿವ ದಿಲೀಪ್ ಘೋಷ್, ಈ ಘಟನೆ ಸಂಭವಿಸಬಾರದಿತ್ತು. “ಅಭಿಷೇಕ್ ಬ್ಯಾನರ್ಜಿಗೆ ಏನಾಗಿದೆಯೋ ಅದು ಆಗಬಾರದಿತ್ತು. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ಸಾರ್ವಜನಿಕರೊಳಗಿನ ಕೋಪವು ಎಲ್ಲೋ ಕಾಣಿಸಿಕೊಂಡಿದೆ ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರ ರಚನೆಯಾದ ನಂತರ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಶನಿವಾರ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ನಡೆಸಲಾಗಿದೆ.
Advertisement