

ನವದೆಹಲಿ: ಬಿಜೆಪಿ ತೊರೆದು ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಜೆಪಿ ನಾಯಕ ಅಣ್ಣಾಮಲೈ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಹೊಸ ಪಕ್ಷ ಸ್ಥಾಪನೆ ಊಹಾಪೋಗಳನ್ನು ತಳ್ಳಿಹಾಕಲು ನಿರಾಕರಿಸಿದ ಅವರು ದಯವಿಟ್ಟು ಕಾಯಿರಿ. ಎರಡು ದಿನಗಳಲ್ಲಿ ಮಾತನಾಡುತ್ತೇವೆ ಎಂದು ಹೇಳಿದರು.
ಮಾಜಿ ಐಪಿಎಸ್ ಅಧಿಕಾರಿ 2026ರ ವಿಧಾನಸಭಾ ಚುನಾವಣೆಯ ನಂತರ ಹೊಸ ರಾಜಕೀಯ ಮಾರ್ಗವನ್ನು ಪರಿಗಣಿಸುತ್ತಿರಬಹುದು ಎಂಬ ತಮಿಳುನಾಡು ರಾಜಕೀಯ ವಲಯಗಳಲ್ಲಿನ ತೀವ್ರ ಊಹಾಪೋಹಗಳ ನಡುವೆ ಈ ನಿಗೂಢ ಹೇಳಿಕೆ ಬಂದಿದೆ. ಅಣ್ಣಾಮಲೈ ಹುಟ್ಟುಹಬ್ಬದ ಮೊದಲು ಕೊಯಮತ್ತೂರಿನಾದ್ಯಂತ ಅವರ ಬೆಂಬಲಿಗರು ಹಾಕಿರುವ ಬೃಹತ್ ಪೋಸ್ಟರ್ಗಳಿಂದ ಈ ಊಹಾಪೋಹಗಳು ಮತ್ತಷ್ಟು ಬಲಗೊಂಡಿವೆ.
ನಮ್ಮ ನಾಯಕ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ ಎಂಬ ಘೋಷಣೆಗಳನ್ನು ಹೊಂದಿರುವ ಪೋಸ್ಟರ್ಗಳು ನಗರದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿವೆ. ಅಲ್ಲದೆ ಬೆಂಬಲಿಗರು ಇದನ್ನು ಶಕ್ತಿ ಪ್ರದರ್ಶನವೆಂದು ವ್ಯಾಪಕವಾಗಿ ವ್ಯಾಖ್ಯಾನಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಅಣ್ಣಾಮಲೈ, ತಮ್ಮ ಭವಿಷ್ಯದ ಕುರಿತ ವರದಿಗಳ ಬಗ್ಗೆ ಮೌನವಾಗಿದ್ದಾರೆ. ಅವುಗಳನ್ನು ದೃಢೀಕರಿಸುವುದಾಗಲಿ ಅಥವಾ ನಿರಾಕರಿಸುವುದಾಗಲಿ ಮಾಡುತ್ತಿಲ್ಲ. ಅವರ ಇತ್ತೀಚಿನ ಹೇಳಿಕೆಗಳು ಕುತೂಹಲವನ್ನು ಹೆಚ್ಚಿಸಿವೆ.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 2020ರಲ್ಲಿ ಬಿಜೆಪಿಗೆ ಸೇರಿದ್ದರು. 2021 ರಿಂದ 2025 ರವರೆಗೆ ತಮಿಳುನಾಡಿನ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ವೇಳೆ ರಾಜ್ಯಾದ್ಯಂತ ಆಕ್ರಮಣಕಾರಿ ಪ್ರಚಾರಗಳು ಮತ್ತು ಬಲವಾದ ಸಾಮಾಜಿಕ ಮಾಧ್ಯಮ ಉಪಸ್ಥಿತಿಯ ಮೂಲಕ ರಾಜ್ಯದಲ್ಲಿ ಅದರ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರಾದರು. 2026ರ ವಿಧಾನಸಭಾ ಚುನಾವಣೆಯ ನಂತರ ಅವರ ಮುಂದಿನ ನಡೆಯ ಕುರಿತಾದ ಪ್ರಶ್ನೆಗಳು ವೇಗ ಪಡೆದುಕೊಂಡಿವೆ.
ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಅಣ್ಣಾಮಲೈ ಆಸಕ್ತಿ ತೋರಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯ ಅನುಷ್ಠಾನಕ್ಕೆ ತರುವ ಕೇಂದ್ರದ ನಿರ್ಧಾರದ ಬಗ್ಗೆ ಅವರ ಇತ್ತೀಚಿನ ಟೀಕೆಯು ಬಿಜೆಪಿ ಜೊತೆಗೆ ಅವರ ಸಂಬಂಧ ಹಳಸಿದೆ ಎಂಬು ಚರ್ಚೆಗಳು ನಡೆಯುತ್ತಿವೆ. ಇನ್ನು ಅಣ್ಣಾಮಲೈ ಬಿಜೆಪಿಯನ್ನು ತೊರೆಯುತ್ತಾರೆ ಎಂಬ ವಿಷಯವನ್ನು ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ.
Advertisement