

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವೇದಾಂತಾ ಗ್ರೂಪ್ಗೆ ಸಂಬಂಧಿಸಿದ ವಿವಿಧ ಕಚೇರಿಗಳ ಮೇಲೆ ದಾಳಿ ಮೇಲೆ ಸೋಮವಾರ ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ದೆಹಲಿ ಹಾಗೂ ರಾಜಸ್ಥಾನ ಸೇರಿ ಹಲವು ಕಚೇರಿಗಳ ಮೇಲೆ ಈ ದಾಳಿ ನಡೆದಿದ್ದು, ಉದ್ಯಮಿ ಅನಿಲ್ ಅಗರ್ವಾಲ್ ಪ್ರೋತ್ಸಾಹಿತ ಜಾಗತಿಕ ಗಣಿಗಾರಿಕಾ ಸಮೂಹದ ವಿರುದ್ಧ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಸಂಬಂಧ ತನಿಖೆ ಆರಂಭಿಸಿದೆ ಎಂದು ತಿಳಿದುಬಂದಿದೆ.
FEMA ಕಾಯ್ದೆಯ ನಾಗರಿಕ (civil) ವಿಧಿಗಳ ಅಡಿಯಲ್ಲಿ ಸಂಭವಿಸಿರುವ ಅಕ್ರಮಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆಂದು ತಿಳಿದುಬಂದಿದೆ.
ಇಡಿ ಕ್ರಮವನ್ನು ದೃಢಪಡಿಸಿದ ವೇದಾಂತಾ ಸಂಸ್ಥೆಯ ವಕ್ತಾರರು, “ಕಂಪನಿ ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಅಧಿಕಾರಿಗಳು ಕೇಳಿರುವ ಎಲ್ಲಾ ಮಾಹಿತಿಯನ್ನು ಒದಗಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಕಂಪನಿ ಎಲ್ಲಾ ಕಾನೂನುಗಳು ಮತ್ತು ನಿಯಮಾವಳಿಗಳನ್ನು ಪಾಲಿಸುವ ಬದ್ಧತೆಯನ್ನು ಮುಂದುವರಿಸಿದೆ. ಪ್ರಕರಣ ಈಗ ನಿಯಂತ್ರಣಾತ್ಮಕ ಪ್ರಕ್ರಿಯೆಯಲ್ಲಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವೇದಾಂತಾ ಲಿಮಿಟೆಡ್ ಭಾರತ ಸೇರಿದಂತೆ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಪೂರ್ವ ಏಷ್ಯಾದ ಹಲವು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಲೋಹ ಹಾಗೂ ಖನಿಜ ಉತ್ಪಾದನಾ ಕಂಪನಿಯಾಗಿದೆ.
Advertisement