

ನವದೆಹಲಿ: ನೀಟ್ ಪೇಪರ್ ಲೀಕ್, ಪರೀಕ್ಷೆ ರದ್ದು ಬೆನ್ನಲ್ಲೇ ದೇಶಾದ್ಯಂತ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಇದರ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ನಿವಾಸಿಯಾಗಿದ್ದ ಆಕಾಂಕ್ಷಾ ಚತುರ್ವೇದಿ ವೈದ್ಯೆಯಾಗಬೇಕೆಂಬ ಕನಸಿನಿಂದ ನಾಗ್ಪುರದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆದರೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದಾದ ಬೆಳವಣಿಗೆಗಳಿಂದ ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿ, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಅವರು, ಇದು ಕೇವಲ ಆತ್ಮಹತ್ಯೆಯಲ್ಲ, "ಭ್ರಷ್ಟ ಮತ್ತು ಹದಗೆಟ್ಟ ವ್ಯವಸ್ಥೆ" ಮಾಡಿದ ಕೊಲೆ ಎಂದು ಆಕ್ರೋಶ ಹೊರಹಾಕಿದ್ದಾರೆ.
“ಆಕಾಂಕ್ಷಾ ದೇಶಕ್ಕೆ ಸೇವೆ ಮಾಡುವ ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದಳು. ಆಕೆಯ ತಂದೆ ರೈತನಾಗಿದ್ದು, ಮಗಳ ಶಿಕ್ಷಣಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ರೂ.3 ಲಕ್ಷ ಸಾಲ ಪಡೆದಿದ್ದರು. ಮಗಳಿಗೆ ತರಬೇತಿ ಕೊಡಿಸಲು ನಾಗ್ಪುರದಲ್ಲಿ ಅಡುಗೆ ಕೆಲಸ ಮಾಡಿಕೊಂಡು ಸಹಾಯ ಮಾಡಿದರು.
ಒಬ್ಬ ತಂದೆ ಮಗಳ ಭವಿಷ್ಯಕ್ಕಾಗಿ ತನ್ನಿಂದಾದ ಎಲ್ಲವನ್ನೂ ಮಾಡಿದ. ಆದರೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು, ಪರೀಕ್ಷೆ ರದ್ದಾಯಿತು. ಆ ಅನಿಶ್ಚಿತತೆಯ ನಡುವೆಯೇ ಆಕಾಂಕ್ಷಾ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾಳೆ. ಇದು ಕೇವಲ ಆತ್ಮಹತ್ಯೆಯಲ್ಲ, ಇದು ಆತ್ಮಹತ್ಯೆಯಲ್ಲ, ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧವೂ ರಾಹುಲ್ ಅವರು ವಾಗ್ದಾಳಿ ನಡೆಸಿದ್ದಾರೆ.
ಅದೇ ಸಮಿತಿಗಳು, ಅದೇ ತನಿಖೆಗಳು, ಅದೇ ವರ್ಗಾವಣೆಗಳು ಮಾತ್ರ ನಡೆಯುತ್ತಿವೆ. ಆದರೆ, ಯಾವುದೇ ನಿಜವಾದ ಸುಧಾರಣೆ ಕಾಣಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
“ಮೋದಿ ಜೀ, ಅಧಿಕಾರ ಶಾಶ್ವತವಲ್ಲ. ಆದರೆ, ಕಳೆದ 12 ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿದ ಪರಿಣಾಮಕ್ಕೆ ದೇಶದ ಯುವಕರು ಬೆಲೆ ಕಟ್ಟುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಮೇ 3ರಂದು ನಡೆದಿದ್ದ ಎನ್ಟಿಎ ಆಯೋಜಿತ NEET-UG 2026 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆ ಮೇ 12ರಂದು ರದ್ದುಗೊಳಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲು ತೀರ್ಮಾನಿಸಲಾಗಿದೆ.
Advertisement