

ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್ ಅಂಗೀಕರಿಸಿದ್ದು ಹಲವು ದಿನಗಳ ಊಹಾಪೋಹಕ್ಕೆ ತೆರೆ ಬಿದ್ದಿದೆ.
ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅಣ್ಣಾಮಲೈ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಈ ಮೂಲಕ ಬಿಜೆಪಿಯೊಂದಿಗಿನ ತಮ್ಮ 6 ವರ್ಷಗಳ ಸುದೀರ್ಘ ಸಂಬಂಧವನ್ನು ಕೊನೆಗೊಳಿಸಿದ್ದಾರೆ.
ಜೂನ್ 2 ರಂದು ಅಣ್ಣಾಮಲೈ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸಲ್ಲಿಕೆಯಾದ ಬಳಿಕ ಅವರು ಬಿಜೆಪಿಯಲ್ಲೇ ಇರುತ್ತಾರೆ. ರಾಜ್ಯಸಭೆಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಈ ಎಲ್ಲಾ ಅಂತ ಕಂತೆ ಸುದ್ದಿಗಳಿಗೆ ವಿರಾಮ ಬಿದ್ದಿದೆ.
2021ರಿಂದ 2025ರವರೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷದ ಭವಿಷ್ಯ ಅಣ್ಣಾಮಲೈ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರಿಂದ ಅವರು ಅಸಮಾಧಾನಗೊಂಡಿದ್ದರು.
ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರೆ ಮಾತ್ರ ಬಿಜೆಪಿ ಬೆಳೆಯುತ್ತದೆ’ ಎಂದು ಅಣ್ಣಾಮಲೈ ನಂಬಿದ್ದರು. ಆದರೆ, ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಎಐಎಡಿಎಂಕೆ ಜತೆ ಸೀಟು ಹಂಚಿಕೆ ಮಾತುಕತೆ ನಡೆಸಿದ ರೀತಿ ಮತ್ತು ಬಿಜೆಪಿಗೆ ನೀಡಿದ ಸೀಟುಗಳ ಬಗ್ಗೆ
ಪ್ರಶ್ನಿಸಿ ಅಣ್ಣಾಮಲೈ ಅವರು ಪಕ್ಷದ ವರಿಷ್ಠರ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ರಾಜೀನಾಮೆ ನೀಡಿದ ಹೊರತಾಗಿಯೂ, ಪಕ್ಷದ ನಾಯಕತ್ವವು ಅಣ್ಣಾಮಲೈ ಅವರ ಸಲಹೆಗಳು ಮತ್ತು ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅವರು ಎತ್ತಿರುವ ಸಮಸ್ಯೆಗಳನ್ನು ಆಂತರಿಕ ವಿಷಯಗಳು ಎಂದು ವಿವರಿಸಿದ್ದು, ಅವುಗಳನ್ನು ಪಕ್ಷದ ಚೌಕಟ್ಟಿನೊಳಗೆ ನಿರ್ವಹಿಸಲಾಗುವುದು ಎಂದು ಹೇಳಿದರು.
ಅಣ್ಣಾಮಲೈ ಅವರ ನಿರ್ಗಮನದ ಪರಿಣಾಮದ ಬಗ್ಗೆ ಪಕ್ಷದಲ್ಲಿನ ಕೆಲವರು ಆತಂಕ ವ್ಯಕ್ತ ಪಡಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಯ ಸಾಂಸ್ಥಿಕ ಕಾರ್ಯಚಟುವಟಿಕೆಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೆಲವರು ಪ್ರತಿಪಾದಿಸಿದರು. ಈ ಬೆಳವಣಿಗೆ ರಾಜ್ಯದಲ್ಲಿ ಪಕ್ಷದ ಮೈತ್ರಿ ಚಲನಶೀಲತೆಯ ಮೇಲೆ ಪ್ರಭಾವ ಬೀರಬಹುದು ಎಂಬ ಊಹಾಪೋಹವನ್ನು ಅವರು ತಳ್ಳಿಹಾಕಿದರು.
Advertisement