

ನವದೆಹಲಿ: ರಾಷ್ಟ್ರ ರಾಜಧಾನಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ನಾಳೆ ನಡೆಯಲಿರುವ 'ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (INDIA) ಜನಬಂಧನ್' ಸಭೆಯಲ್ಲಿ ಇಪ್ಪತ್ತಮೂರು ರಾಜಕೀಯ ಪಕ್ಷಗಳು ಭಾಗವಹಿಸುವುದನ್ನು ದೃಢಪಡಿಸಿವೆ ಎಂದು ಕಾಂಗ್ರೆಸ್ ಹೇಳಿದೆ.
ವಿರೋಧ ಪಕ್ಷಗಳು ತಮ್ಮ ವೈವಿಧ್ಯತೆಯ ಮೂಲಕ ಒಗ್ಗಟ್ಟಿನಿಂದ ನಿಂತಿವೆ ಎಂದು ಪ್ರತಿಪಾದಿಸಿದೆ. ತಮ್ಮದೇ ಆದ ಕಾರಣಗಳಿಗಾಗಿ ಈ ಸಭೆಯಲ್ಲಿ ಭಾಗವಹಿಸಲು ಅಸಮರ್ಥತೆ ವ್ಯಕ್ತಪಡಿಸಿರುವ ಕೆಲವು ಪಕ್ಷಗಳಿವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಜೂನ್ 8, 2026 ರಂದು ಸೋಮವಾರ ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ನಡೆಯಲಿರುವ ಇಂಡಿಯಾ ಜನಬಂಧನ್ ಸಭೆಯಲ್ಲಿ 23 ರಾಜಕೀಯ ಪಕ್ಷಗಳು ಭಾಗವಹಿಸುವುದನ್ನು ದೃಢಪಡಿಸಿವೆ' ಎಂದು ತಿಳಿಸಿದ್ದಾರೆ.
ರಮೇಶ್ ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್, "ಸಾಮಾನ್ಯ ಉದ್ದೇಶ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಸಭೆ ನಡೆಯುತ್ತಿದೆ. ಭಾರತ ಒಗ್ಗಟ್ಟಾಗಿದೆ. ಅನೇಕ ಪಕ್ಷಗಳು ಸೌಹಾರ್ದತೆಯ ಭಾವನೆಯಲ್ಲಿ ಭೇಟಿಯಾಗಲು ಎದುರು ನೋಡುತ್ತಿವೆ ಎಂದಿದ್ದಾರೆ.
ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುವ, ಪ್ರತಿದಿನ ಸಂವಿಧಾನದ ಮೇಲೆ ದಾಳಿ ಮಾಡುವ, ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡುವ, ಕೋಟ್ಯಂತರ ಭಾರತೀಯರ ಜೀವನೋಪಾಯಕ್ಕೆ ಗಂಭೀರ ಹಾನಿ ಮಾಡುವ, ನಿರಂತರ ಬೆಲೆ ಏರಿಕೆಯ ಮೂಲಕ ಮನೆಯ ಬಜೆಟ್ ಅನ್ನು ಮುರಿಯುವ, ಲಕ್ಷಾಂತರ ಯುವಕರ ಭರವಸೆ ಮತ್ತು ಆಕಾಂಕ್ಷೆಗಳಿಗೆ ದ್ರೋಹ ಬಗೆಯುವ, ಹೂಡಿಕೆ ವಾತಾವರಣವನ್ನು ಕುಗ್ಗಿಸುವ ಮತ್ತು ತನ್ನ ವಿದೇಶಾಂಗ ನೀತಿಯಿಂದ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಳ್ಳುವ ಮೋದಿ ಸರ್ಕಾರದ ನೀತಿಗಳು ಮತ್ತು ಕ್ರಮಗಳಿಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದರೂ ಸಹ, ತಮ್ಮದೇ ಆದ ಕಾರಣಗಳಿಗಾಗಿ ಈ ನಿರ್ದಿಷ್ಟ ಸಭೆಯಲ್ಲಿ ಭಾಗವಹಿಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ ಕೆಲವು ಪಕ್ಷಗಳಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಪರ್ಕ-ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.
ಭಾರತದಂತೆಯೇ ಇಂಡಿಯಾ ಜನಬಂಧನ್' ತನ್ನ ವೈವಿಧ್ಯತೆಯ ಮೂಲಕ ಒಗ್ಗಟ್ಟಿನಿಂದ ನಿಂತಿದೆ. 2029 ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂಡಿಯಾ ಬಣವು ಭವಿಷ್ಯದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಸಜ್ಜಾಗಿದೆ. ರಾಷ್ಟ್ರೀಯ ವಿಷಯಗಳಲ್ಲಿ ಮೋದಿ ಸರ್ಕಾರವನ್ನು ಮೂಲೆಗುಂಪು ಮಾಡಲು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಎದುರು ನೋಡುತ್ತಿದೆ.
ತಮಿಳುನಾಡಿನಲ್ಲಿ ಕಾಂಗ್ರೆಸ್ ದ್ರೋಹ ಬಗೆದು ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದೆ ಎಂದು ಡಿಎಂಕೆ ಆರೋಪಿಸಿದ್ದರೆ ಕೇರಳದಲ್ಲಿ ಎಡಪಂಥೀಯರು ಬಿಜೆಪಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬ ಕಾಂಗ್ರೆಸ್ ನ ಉನ್ನತ ನಾಯಕರ ಆರೋಪದ ಬಗ್ಗೆ ಭಾರತ-ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ನಡುವೆ ಇಂಡಿಯಾ ಬಣದ ಸಭೆ ನಡೆಯುತ್ತಿದೆ. ವಿರೋಧ ಪಕ್ಷಗಳ ನಡುವೆ ಸಮನ್ವಯವನ್ನು ಗಾಢಗೊಳಿಸುವ ಪ್ರಯತ್ನವಾಗಿ ಈ ಸಭೆಯನ್ನು ನೋಡಲಾಗುತ್ತಿದೆ.
Advertisement