

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆಯುತ್ತಿರುವ 'ಆಪರೇಷನ್ ಶೇರುವಾಲಿ' (Operation Sheruwali) ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ವೇಳೆ, ಕಡಿದಾದ ಪರ್ವತದ ಮೇಲಿಂದ ಆಕಸ್ಮಿಕವಾಗಿ ಜಾರಿ ಆಳವಾದ ಕಂದಕಕ್ಕೆ ಬಿದ್ದು ಭಾರತೀಯ ಸೇನಾ ಯೋಧನರೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಸಾವನ್ನಪ್ಪಿದ ಯೋಧ. ಗಂಭೀರ್ ಮುಘ್ಲಾನ್-ಡೋರಿಮಲ್ ಪ್ರದೇಶದ ದುರ್ಗಮ ಪರ್ವತ ಪ್ರದೇಶದಲ್ಲಿ ಉಗ್ರರ ವಿರುದ್ಧದ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇವರು, ಇಳಿಜಾರಿನಲ್ಲಿ ಸಾಗುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಯೋಧರನ್ನು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೌರಿಯ ಗಂಭೀರ್ ಮುಘ್ಲಾನ್ ಮತ್ತು ಡೋರಿಮಲ್ ಅರಣ್ಯ ಪ್ರದೇಶಗಳಲ್ಲಿ ಅಡಗಿರುವ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಕಳೆದ 16 ದಿನಗಳಿಂದ ‘ಆಪರೇಷನ್ ಶೇರುವಾಲಿ’ ನಡೆಸುತ್ತಿವೆ. ಉಗ್ರರ ಉಪಸ್ಥಿತಿಯ ಬಗ್ಗೆ ದೊರೆತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮೇ 28ರಂದು ಡೋರಿಮಲ್ ಅರಣ್ಯ ಪ್ರದೇಶದಲ್ಲಿ ಭಾರೀ ಗುಂಡಿನ ಚಕಮಕಿ ಮತ್ತು ಶೆಲ್ ದಾಳಿ ನಡೆದಿದ್ದು, ಕಾರ್ಯಾಚರಣೆ ನಿರ್ಣಾಯಕ ಹಂತ ತಲುಪಿತ್ತು.
ಉಗ್ರರು ತಪ್ಪಿಸಿಕೊಳ್ಳದಂತೆ ಕಾರ್ಯಾಚರಣೆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದು ಭದ್ರತಾ ಪಡೆಗಳು ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿವೆ.
ಉಗ್ರರು ದಟ್ಟ ಅರಣ್ಯದ ಮೂಲಕ ಪರಾರಿಯಾಗದಂತೆ ಹೆಚ್ಚುವರಿ ಭದ್ರತಾ ಪಡೆಗಳು, ವಿಶೇಷ ತಂಡಗಳು ಹಾಗೂ ಅಗತ್ಯ ಲಾಜಿಸ್ಟಿಕ್ ಬೆಂಬಲವನ್ನು ನಿಯೋಜಿಸಲಾಗಿದೆ.
ಉಗ್ರರನ್ನು ಸದೆಬಡಿಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಸಂಪೂರ್ಣ ಪ್ರದೇಶ ಕಟ್ಟುನಿಟ್ಟಿನ ಭದ್ರತಾ ನಿಗಾದಲ್ಲಿದ್ದು, ಅರಣ್ಯ ಪ್ರದೇಶದ ಒಳಭಾಗದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
Advertisement