

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಯಶಸ್ವಿಯಾಗಿ 12 ವರ್ಷಗಳ ಪೂರೈಸಿದ್ದು, ಈ ನಡುವಲ್ಲೇ ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿ, ಬಡವರ ಮತ್ತು ವಂಚಿತರ ಕಲ್ಯಾಣವೇ ನಮ್ಮ ಸರ್ಕಾರದ ಮೂಲಮಂತ್ರವಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸೋಮವಾರ ಪೋಸ್ಟ್ ಮಾಡಿರುವ ಅವರು, ಕಳೆದ 12 ವರ್ಷಗಳಲ್ಲಿ ಭಾರತದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿವೆ. ಈ ಎಲ್ಲ ಅಭಿವೃದ್ಧಿಗಳ ಹೃದಯಭಾಗದಲ್ಲಿ ಬಡವರು ಮತ್ತು ವಂಚಿತ ವರ್ಗಗಳ ಕಲ್ಯಾಣವಿದೆ. ಅಂತ್ಯೋದಯ ತತ್ವದಿಂದ ಪ್ರೇರಿತವಾಗಿ, ಹಲವು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾಗಿದ್ದ ಜನರಿಗೆ ಅದರ ಲಾಭ ತಲುಪಿಸುವುದು ನಮ್ಮ ನಿರಂತರ ಪ್ರಯತ್ನವಾಗಿದೆ ಎಂದು ಹೇಳಿದ್ದಾರ.
ಬಡವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜನಧನ್ ಖಾತೆಗಳು, ನೇರ ನಗದು ವರ್ಗಾವಣೆ (DBT), ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲ್ ಜೀವನ್ ಮಿಷನ್ ಹಾಗೂ ಆಯುಷ್ಮಾನ್ ಭಾರತ್ ಯೋಜನೆಗಳ ಮೂಲಕ ಜನರಿಗೆ ಗೌರವಯುತ ಜೀವನ, ಅವಕಾಶಗಳು ಹಾಗೂ ಉತ್ತಮ ಜೀವನಮಟ್ಟ ಒದಗಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.
ತಂತ್ರಜ್ಞಾನವು ಬಡವರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲು ನೆರವಾಗಿದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಸರ್ಕಾರದ ನೆರವು ನೇರವಾಗಿ ಫಲಾನುಭವಿಗಳ ಕೈಗೆ ತಲುಪುತ್ತಿದ್ದು, ಇದರಿಂದ ಸೋರಿಕೆ ಕಡಿಮೆಯಾಗಿ, ಪಾರದರ್ಶಕತೆ ಮತ್ತು ಆಡಳಿತದ ಮೇಲಿನ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಡವರ ಕಲ್ಯಾಣದ ಪಯಣವು ಈಗ ಮಾನವ ಸಬಲೀಕರಣದ ಚಳವಳಿಯಾಗಿ ರೂಪುಗೊಂಡಿದ್ದು, ವಿಕಸಿತ ಭಾರತದ ಕನಸನ್ನು ನನಸಾಗಿಸುವತ್ತ ದೇಶ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಎನ್ಡಿಎ ನಾಯಕರು #12YearsOfGaribKalyan ಹ್ಯಾಷ್ಟ್ಯಾಗ್ ಮೂಲಕ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಈ ಅವಧಿಯನ್ನು “ಗರೀಬ್ ಕಲ್ಯಾಣಕ್ಕೆ ಸಮರ್ಪಿತ 12 ವರ್ಷಗಳು” ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪ್ರಕಟಣೆಯೊಂದರಲ್ಲಿ, ಕಳೆದ 12 ವರ್ಷಗಳಲ್ಲಿ ಬಡವರ ಕಲ್ಯಾಣವನ್ನು ಸರ್ಕಾರ ತನ್ನ ಪ್ರಮುಖ ಗುರಿಯನ್ನಾಗಿ ಮಾಡಿಕೊಂಡಿದೆ ಎಂದು ಹೇಳಿದೆ. “ಇದು ತುಷ್ಟೀಕರಣದ ರಾಜಕೀಯವಲ್ಲ; ಬದಲಾಗಿ ಬಡವರ ಬದುಕಿನಲ್ಲಿ ನಿಜವಾದ ಬದಲಾವಣೆ ತರಲು ಕೈಗೊಂಡ ಪ್ರಯತ್ನವಾಗಿದೆ” ಎಂದು ತಿಳಿಸಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ದೇಶದ ಕೋಟ್ಯಾಂತರ ಜನರಿಗೆ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಿದೆ. 2014ರಲ್ಲಿ ಪ್ರಧಾನಿ ಮೋದಿ ನೀಡಿದ್ದ ‘ಗರೀಬ್ ಕಲ್ಯಾಣ’ ಭರವಸೆಗಳನ್ನು ಸಾಕಾರಗೊಳಿಸಲು ಜಾರಿಗೊಂಡ ವಿವಿಧ ಯೋಜನೆಗಳು ಗ್ರಾಮೀಣ ಜನರು ಹಾಗೂ ಹಿಂದುಳಿದ ವರ್ಗಗಳ ಬದುಕಿನಲ್ಲಿ ಪರಿವರ್ತನೆ ತಂದಿವೆ ಎಂದು ಉಲ್ಲೇಖಿಸಲಾಗಿದೆ.
ಅಂತಾರಾಷ್ಟ್ರೀಯ ವರದಿಗಳನ್ನು ಉಲ್ಲೇಖಿಸಿರುವ ಸರ್ಕಾರ, ಭಾರತದಲ್ಲಿ ಬಡತನ ವೇಗವಾಗಿ ಇಳಿಕೆಯಾಗುತ್ತಿದೆ ಎಂದು ಹೇಳಿದೆ. ದೇಶದ ಉನ್ನತ ನಾಯಕತ್ವ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ಬಡವರ ಸಬಲೀಕರಣ ಮತ್ತು ಅಂತ್ಯೋದಯದ ತತ್ವ ಪ್ರಮುಖವಾಗಿದ್ದು, ಅದು ಆಡಳಿತದ ಅವಿಭಾಜ್ಯ ಭಾಗವಾಗಿದೆ ಎಂದು ಪ್ರತಿಪಾದಿಸಿದೆ.
Advertisement