

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಚೇರಿ ಹಾಗೂ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(BMC) ಸೇರಿದಂತೆ ಮುಂಬೈನ ಹಲವು ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬುಧವಾರ ಖಾಲಿಸ್ತಾನ್ "ಬೆದರಿಕೆ" ಹಾಕಿರುವ ಇಮೇಲ್ಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಸಿಯ ಹಲವಾರು ಅಧಿಕೃತ ಇಮೇಲ್ ಐಡಿಗಳಿಗೆ ಬೆದರಿಕೆ ಇಮೇಲ್ಗಳು ಬಂದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಮುಖ್ಯಮಂತ್ರಿಗಳ ಕಚೇರಿ, ಮೇಯರ್ ಕಚೇರಿ, BSE(ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಕಟ್ಟಡ ಮತ್ತು ಮಹಾನಗರ ಕಚೇರಿಗಳಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಇಮೇಲ್ಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಇಮೇಲ್ ನಲ್ಲಿ ತಮ್ಮನ್ನು ತಾವು "ಖಾಲಿಸ್ತಾನ್ ರಾಷ್ಟ್ರೀಯ ಸೇನೆ" ಎಂದು ಉಲ್ಲೇಖಿಸಿದ್ದಾರೆ ಮತ್ತು ವಿವಿಧ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹಾಗೂ ಬೆದರಿಕೆ ಹಾಕುವ ವಿಷಯ ಅದರಲ್ಲಿದೆ ಎಂದು BMC ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳು ಈ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೇ ರೀತಿಯ ವಿಷಯವನ್ನು ಹೊಂದಿರುವ ಮತ್ತೊಂದು ಇಮೇಲ್ ನಲ್ಲಿ, ಮಧ್ಯಾಹ್ನ 1.11ಕ್ಕೆ ಮುಂಬೈ ಮೇಯರ್ ಕಚೇರಿಯನ್ನು ಸುಧಾರಿತ ಸ್ಫೋಟಕ ಸಾಧನ ತುಂಬಿದ ಕಾರನ್ನು ಬಳಸಿ ಸ್ಫೋಟಿಸಲಾಗುವುದು ಎಂದು ಹೇಳಿಲಾಗಿದೆ. ಬಿಎಸ್ಇ ಕಟ್ಟಡ, ಸಿಎಂಒ ಮತ್ತು ಬಿಎಂಸಿ ಕಚೇರಿಗಳಿಗೆ ನಿರ್ದಿಷ್ಟ ಸಮಯದಲ್ಲಿ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 351 (1) (ಬಿ) ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಕ್ರಿಮಿನಲ್ ಬೆದರಿಕೆಗಾಗಿ ಪ್ರಕರಣ ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಬಿಎಂಸಿ ಕಟ್ಟಡ ಮತ್ತು ಮೇಯರ್ ರಿತು ತ್ವಾಡೆ ಅವರ ಕಚೇರಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಏತನ್ಮಧ್ಯೆ, ಬಾಂಬ್ ಬೆದರಿಕೆ ಇಮೇಲ್ನಿಂದ ನಾನು ಹೆದರುವುದಿಲ್ಲ ಮತ್ತು ತಮ್ಮ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತೇನೆ ಎಂದು ತಾವ್ಡೆ ಹೇಳಿದ್ದಾರೆ.
Advertisement