

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣ ಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಗೆ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದೆ. ಧರ್ಮತಾಲದಲ್ಲಿ ನಡೆದ ಪ್ರತಿಭಟನೆ ವೇಳೆಯಲ್ಲಿ ಪ್ರಚೋದನಕಾರಿ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಲಾಗಿದೆ.
ಧರ್ಮತಾಲಾದಲ್ಲಿ ನಡೆದ ಪ್ರತಿಭಟನೆ ವೇಳೆ, ನಾವು ಇಲ್ಲಿರುವುದರಿಂದ ನೀವು ಸುರಕ್ಷಿತರಾಗಿದ್ದೀರಿ. ನಾವು ಇಲ್ಲದಿದ್ದರೆ, ಒಂದು ನಿರ್ದಿಷ್ಟ ಸಮುದಾಯದ ಜೀವನ ಕಷ್ಟ ಆಗುತಿತ್ತು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಹರೇ ಸ್ಟ್ರೀಟ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ತೃಣಮೂಲ ಕಾಂಗ್ರೆಸ್ ಬಂಡಾಯದ ಬೇಗುದಿಯಲ್ಲಿ ಬೇಯುತ್ತಿರುವಂತೆಯೇ ಈಗ ಎಫ್ ಐಆರ್ ದಾಖಲಾಗಿರುವುದು ಮಮತಾ ಬ್ಯಾನರ್ಜಿಗೆ ಮತ್ತೊಂದು ಹೊಡೆತ ಆಗಿದೆ.
ಈ ಮಧ್ಯೆ ಬಂಡಾಯ ಗುಂಪಿನ 19 ಸಂಸದರು ಲೋಕಸಭೆಯಲ್ಲಿ ನಿಜವಾದ ಟಿಎಂಸಿ ಎಂದು ಗುರುತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಬಂಡಾಯ ಗುಂಪಿನ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಶುಕ್ರವಾರ ಹೇಳಿದ್ದಾರೆ. ಈ ಸಂಬಂಧ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈಗಾಗಲೇ ಪತ್ರ ಸಲ್ಲಿಸಿದ್ದು, ಸೋಮವಾರ ಮತ್ತೆ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಜೂನ್ 8 ರಂದು ಸಹಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೂ 19 ಸಂಸದರು ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಸ್ಪೀಕರ್ ಜೊತೆಗಿನ ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಸಂಸದರಾದ ಸೌಗತ್ ರಾಯ್, ಶತ್ರುಘ್ನ ಸಿನ್ಹಾ, ಪ್ರತಿಮಾ ಮಂಡಲ್ ಮತ್ತಿತರರು ಮಮತಾ ಬ್ಯಾನರ್ಜಿಗೆ ನಿಷ್ಠೆ ವ್ಯಕ್ತಪಡಿಸಿದ್ದಾರೆ . ಅವರೊಂದಿಗೆ ಮುಂದುವರೆಯುವುದಾಗಿ ಅವರು ತಿಳಿಸಿದ್ದಾರೆ.
Advertisement