

ನವದೆಹಲಿ: ಮಧ್ಯಪ್ರದೇಶ ರಾಜ್ಯಸಭೆ ಚುನಾವಣಾ ನಾಮಪತ್ರ ತಿರಸ್ಕಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನೆಡೆಯಾಗಿದೆ.
ನಾಮಪತ್ರ ತಿರಸ್ಕೃತವಾದ ಬಳಿಕ ಸಾಮಾನ್ಯವಾಗಿ ಪರಿಹಾರಕ್ಕಾಗಿ ಚುನಾವಣಾ ಆಯೋಗದ ಮೊರೆ ಹೋಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್ ಚಂದೂರ್ಕರ್ ಅವರಿದ್ದ ಪೀಠವು, ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದೆ.
ಇದೇ ರೀತಿಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿರುವ ಯಾವುದೇ ಪೂರ್ವ ನಿದರ್ಶನವಿದೆಯೇ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದೆ.
“ನಾಮಪತ್ರ ತಿರಸ್ಕರಿಸಿದ ನಿರ್ಧಾರ ಎಷ್ಟೇ ತಪ್ಪಾಗಿದ್ದರೂ, ಅದರ ವಿರುದ್ಧದ ಪರಿಹಾರ ಸಾಮಾನ್ಯವಾಗಿ ಬೇರೆ ವೇದಿಕೆಯಲ್ಲಿ ದೊರೆಯುತ್ತದೆ. ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸಿರುವ ಯಾವುದೇ ತೀರ್ಪು ಇದೆಯೇ?” ಎಂದು ಪೀಠ ಪ್ರಶ್ನಿಸಿದೆ.
ನಟರಾಜನ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಅಭ್ಯರ್ಥಿಗಳು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಪಡುವ ಅಪರಾಧ ಪ್ರಕರಣಗಳ ವಿವರಗಳನ್ನು ಮಾತ್ರ ಬಹಿರಂಗಪಡಿಸಬೇಕಾಗುತ್ತದೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಕೇವಲ ಸಮನ್ಸ್ ಜಾರಿಯಾಗಿದ್ದು, ನಾಮಪತ್ರ ತಿರಸ್ಕರಿಸಿರುವುದು ಸರಿಯಲ್ಲ ಎಂದು ವಾದಿಸಿದರು.
ಮಧ್ಯಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು, ಜನಪ್ರತಿನಿಧಿತ್ವ ಕಾಯ್ದೆ (Representation of the People Act) ಅಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂಬ ಕಾರಣಕ್ಕೆ ರಿಟರ್ನಿಂಗ್ ಅಧಿಕಾರಿ ತಿರಸ್ಕರಿಸಿದ್ದಾರೆ ಎಂದು ನಟರಾಜನ್ ಆರೋಪಿಸಿದ್ದಾರೆ.
ಆದರೆ ರಿಟರ್ನಿಂಗ್ ಅಧಿಕಾರಿ ಅರವಿಂದ್ ಶರ್ಮಾ ತಮ್ಮ ಆದೇಶದಲ್ಲಿ, ನಾಮಪತ್ರದೊಂದಿಗೆ ಸಲ್ಲಿಸಲಾದ ಫಾರ್ಮ್-26 ಅಫಿಡವಿಟ್ನಲ್ಲಿ ನ್ಯಾಯಾಲಯದ ದೂರಿನ ಮಾಹಿತಿಯನ್ನು ನಟರಾಜನ್ ಉಲ್ಲೇಖಿಸಿಲ್ಲ ಹಾಗೂ ಅಪೂರ್ಣ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಯ ಮೂಲಗಳ ಪ್ರಕಾರ. ಬಿಜೆಪಿ ಅಭ್ಯರ್ಥಿ ಮಹೇಶ್ ಕೆವಾತ್ ಅವರು, ನಟರಾಜನ್ ಅವರು ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ತಮ್ಮ ಚುನಾವಣಾ ಅಫಿಡವಿಟ್ನಲ್ಲಿ ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದು, ಈ ದೂರಿನ ಆಧಾರದ ಮೇಲೆ ನಾಮಪತ್ರ ಪರಿಶೀಲನೆ ವೇಳೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Advertisement