ಟ್ರಕ್‌ಗಳಿಂದ ಬಿಜೆಪಿ ನಾಯಕನ ಕಾರು ಅಡ್ಡಗಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ; ಗಾಯಗೊಂಡಿದ್ದ ಇತರ ಇಬ್ಬರು ಸಾವು!

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರು ಆರೋಪಿಗಳಾದ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಅವರನ್ನು ಬಂಧಿಸಿದ್ದಾರೆ. ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.
BJP Leader Burnt Alive After His SUV Was Trapped Between Trucks in Chhattisgarh
ಬಿಜೆಪಿ ನಾಯಕರನ ಕಾರಿಗೆ ಬೆಂಕಿ
Updated on

ಕೊರಿಯಾ (ಛತ್ತೀಸಗಢ): ಮರಳು ಗಣಿಗಾರಿಕೆಗೆ ಸಂಬಂಧಿಸಿದ ದೀರ್ಘಕಾಲದ ಸಂಘರ್ಷವು ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಫಾರ್ಚೂನರ್ ಎಸ್‌ಯುವಿ ಕಾರನ್ನು ಎರಡು ಟ್ರಕ್‌ಗಳು ತಡೆದಿದ್ದು, ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಬಿಜೆಪಿ ನಾಯಕ ಮತ್ತು ಜನಪದ್ ಪಂಚಾಯತ್ ಮಾಜಿ ಅಧ್ಯಕ್ಷ, ಲಲ್ಲಾ ಸಿಂಗ್ ಎಂದೇ ಜನಪ್ರಿಯರಾಗಿರುವ ಭರತ್ ಸಿಂಗ್ ಸೇರಿದಂತೆ ಮೂವರು ಸಜೀವ ದಹನಗೊಂಡಿದ್ದಾರೆ.

ಸೋನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತರ ಕುಟುಂಬದ ಪ್ರಕಾರ, ಮರಳು ಕ್ವಾರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿವಾದವನ್ನು ಇತ್ಯರ್ಥಪಡಿಸಲು ಭರತ್ ಸಿಂಗ್ ಹೋಗಿದ್ದರು. ಆದರೆ, ಅವರು ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರು ಆರೋಪಿಗಳಾದ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಮತ್ತು ಮನ್ನು ತ್ರಿಪಾಠಿ ಅವರನ್ನು ಬಂಧಿಸಿದ್ದಾರೆ. ಇತರರಿಗಾಗಿ ಹುಡುಕಾಟ ನಡೆಯುತ್ತಿದೆ. ಕೊಲೆ ಮತ್ತು ಕೊಲೆಯತ್ನ ಸೇರಿದಂತೆ ಗಂಭೀರ ಆರೋಪಗಳ ಅಡಿಯಲ್ಲಿ ಒಂಬತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಹಿಂಸಾಚಾರವು ಕೊರಿಯಾದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿದ್ದು, ಉದ್ವಿಗ್ನತೆ ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಆರಂಭಿಕ ವರದಿಗಳ ಪ್ರಕಾರ, ಈ ಪ್ರದೇಶದ ಮರಳು ಗಣಿಗಾರಿಕೆ ಗುತ್ತಿಗೆಯನ್ನು ಬಿಜೆಪಿ ನಾಯಕ ಭರತ್ ಸಿಂಗ್ ಅವರ ಕುಟುಂಬಕ್ಕೆ ನೀಡಲಾಗಿದೆ ಎಂದು ವರದಿಯಾಗಿದೆ. ಅದಾದ ನಂತರ, ಹಲವಾರು ಹಳ್ಳಿಗಳಲ್ಲಿ ಮರಳು ಸಾಗಣೆಯನ್ನು ಯಾರು ನಿಯಂತ್ರಿಸುತ್ತಾರೆ ಮತ್ತು ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದ ಹಣವನ್ನು ಯಾರು ಸಂಗ್ರಹಿಸುತ್ತಾರೆ ಎಂಬುದರ ಕುರಿತು ತೀವ್ರ ಪೈಪೋಟಿ ಉಂಟಾಗಿದೆ. ಭರತ್ ಸಿಂಗ್ ಅವರ ಬಣ ಮತ್ತು ಬಿಜೆಪಿ ನಾಯಕ ಮನೋಜ್ ತ್ರಿಪಾಠಿ ಅವರ ಕುಟುಂಬದ ನಡುವೆ ಈ ವಿವಾದ ತಿಂಗಳುಗಳಿಂದ ನಡೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

BJP Leader Burnt Alive After His SUV Was Trapped Between Trucks in Chhattisgarh
Watch | ದೆಹಲಿ: ರೆಸ್ಟೋರೆಂಟ್‌ ನಲ್ಲಿ ಅಗ್ನಿ ಅವಘಡ; ವಿದೇಶಿ ಪ್ರವಾಸಿಗರು ಸೇರಿ 21 ಮಂದಿ ಸಜೀವ ದಹನ

ಮನೋಜ್ ತ್ರಿಪಾಠಿ ಅವರ ಕುಟುಂಬವು ಮರಳು ಸಾಗಿಸಲು ಬಳಸುವ ಟ್ರಕ್‌ಗಳನ್ನು ಹೊಂದಿತ್ತು. ಎರಡೂ ಕಡೆಯವರು ಮರಳು ಗಣಿಗಾರಿಕೆ ಮೇಲಿನ ನಿಯಂತ್ರಣಕ್ಕಾಗಿ ಸ್ಪರ್ಧಿಸಿದರು. ಮಂಗಳವಾರ ರಾತ್ರಿ, ಘರ್ಷಣೆ ಅತ್ಯಂತ ಕ್ರೂರ ಹಂತವನ್ನು ತಲುಪಿತು.

ಭರತ್ ಸಿಂಗ್ ಮತ್ತು ಇತರರು ಪ್ರಯಾಣಿಸುತ್ತಿದ್ದ ಫಾರ್ಚೂನರ್ ಕಾರನ್ನು ಸುತ್ತುವರೆಯಲಾಗಿದೆ. ಎಸ್‌ಯುವಿಯ ಮುಂದೆ ಮತ್ತು ಹಿಂದೆ ಟ್ರಕ್‌ಗಳು ನಿಂತು, ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಇಲ್ಲದಂತಾಗಿಸಿವೆ. ಅದಾದ ಕೆಲವೇ ಕ್ಷಣಗಳ ನಂತರ, ವಾಹನಕ್ಕೆ ಬೆಂಕಿ ಹಚ್ಚಲಾಯಿತು ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.

ಭರತ್ ಸಿಂಗ್ ವಾಹನದೊಳಗೆ ಸಜೀವ ದಹನವಾಗಿದ್ದಾರೆ. ದಾಳಿಯಲ್ಲಿ ವಿರೇಂದ್ರ ಸಿಂಗ್ ಮತ್ತು ಶಿಕ್ಷಕ ಮತ್ತು ಭರತ್ ಸಿಂಗ್ ಅವರ ಸೋದರಸಂಬಂಧಿ ನಾಗೇಂದ್ರ ಸಿಂಗ್ ಎಂಬ ಇಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವಿಗೀಡಾಗಿದ್ದಾರೆ.

ಮತ್ತೊಬ್ಬ ಗಾಯಗೊಂಡ ವ್ಯಕ್ತಿ ಮಯಾಂಕ್ ಸಿಂಗ್ ಬಿಲಾಸ್ಪುರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರ ತಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿವೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಜೊತೆ ಸಂಬಂಧ ಹೊಂದಿದ್ದ ಭರತ್ ಸಿಂಗ್, ಭೂಪೇಶ್ ಬಘೇಲ್ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸೇರಿದ್ದರು. ಪ್ರಭಾವಿ ವ್ಯಕ್ತಿಯಾಗಿದ್ದ ಅವರು ಆಗಾಗ್ಗೆ ಫಾರ್ಚೂನರ್ ಎಸ್‌ಯುವಿಯಲ್ಲಿ ಹೂಟರ್‌ನೊಂದಿಗೆ ಓಡಾಡುತ್ತಿದ್ದರು.

ಸಂತ್ರಸ್ತರ ಕುಟುಂಬವು ಸಿಬಿಐ ತನಿಖೆಗೆ ಒತ್ತಾಯಿಸಿದೆ. ದಾಳಿಯನ್ನು ಎಚ್ಚರಿಕೆಯಿಂದ ಯೋಜಿಸಲಾಗಿತ್ತು. ಆರೋಪಿಗಳ ವಿರುದ್ಧ ಕಠಿಣ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಆದಾಗ್ಯೂ, ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಏನೆಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ ಚೌಬೆ ಮಾತನಾಡಿ, ಪ್ರಾಥಮಿಕ ಸಂಶೋಧನೆಗಳು ತ್ರಿಪಾಠಿ ಮತ್ತು ಠಾಕೂರ್ ಬಣಗಳ ನಡುವಿನ ಮರಳು ಗಣಿಗಾರಿಕೆಗೆ ಸಂಬಂಧಿಸಿದ ದೀರ್ಘಕಾಲದ ವಿವಾದವನ್ನು ಸೂಚಿಸುತ್ತವೆ. ಠಾಕೂರ್ ಕುಟುಂಬದ ಸದಸ್ಯರು ರಾತ್ರಿ 9.30 ರಿಂದ 10 ಗಂಟೆಯ ಸುಮಾರಿಗೆ ಆ ಪ್ರದೇಶವನ್ನು ತಲುಪಿದರು. ನಂತರ ಘರ್ಷಣೆ ಮತ್ತು ದೈಹಿಕ ಹಲ್ಲೆ ನಡೆಯಿತು. ಘರ್ಷಣೆಯ ಸಮಯದಲ್ಲಿ, ಫಾರ್ಚೂನರ್ ಕಾರಿಗೆ ಬೆಂಕಿ ಹಚ್ಚಲಾಯಿತು. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇತರರು ಪರಾರಿಯಾಗಿದ್ದಾರೆ. ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ ಎಂದು ಅವರು ಹೇಳಿದರು.

ಸೋನ್ಹತ್ ಎಸ್‌ಎಚ್‌ಒ ವಿನೋದ್ ಪಾಸ್ವಾನ್ ಕೂಡ ಎರಡೂ ಕಡೆಯ ಗಣಿಗಾರಿಕೆ ವಿವಾದವನ್ನು ದೃಢಪಡಿಸಿದರು. ಒಂದು ಕಡೆ ಕ್ರಷರ್ ನಡೆಸುತ್ತಿದ್ದ ಲಲ್ಲಾ ಸಿಂಗ್ ಜೊತೆ ಸಂಬಂಧ ಹೊಂದಿದ್ದರೆ, ಇನ್ನೊಂದು ಕಡೆ ತ್ರಿಪಾಠಿ ಕುಟುಂಬದೊಂದಿಗೆ ಸಂಬಂಧ ಹೊಂದಿದೆ. ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪ್ರಕರಣಗಳು ಸಹ ದಾಖಲಾಗಿದ್ದವು. ಲಲ್ಲಾ ಸಿಂಗ್ ಕೆಲವು ಸಮಯದವರೆಗೆ ಅಕ್ರಮ ಮರಳು ಗಣಿಗಾರಿಕೆಯನ್ನು ನಿಲ್ಲಿಸಿದ್ದರು. ಆದರೆ, ಇತ್ತೀಚೆಗೆ ಚಟುವಟಿಕೆ ಪುನರಾರಂಭವಾಯಿತು. ಘಟನೆಯ ಹಿಂದಿನ ದಿನಗಳಲ್ಲಿ, ಮಯಾಂಕ್ ಸಿಂಗ್ ತ್ರಿಪಾಠಿ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ, ನಂತರ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com