

ನವದೆಹಲಿ: ಭಾರತದಲ್ಲಿ ನೈರುತ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಶೇ.41 ಮಳೆ ಕೊರತೆಯಾಗಿದೆ ಎಂದು ಹೇಳಲಾಗಿದೆ.
ದಕ್ಷಿಣ ಮಹಾರಾಷ್ಟ್ರದ ಮೇಲೆ ನೈಋತ್ಯ ಮುಂಗಾರು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಜೂನ್ 4ರಿಂದ ಜೂನ್ 18ರವರೆಗೆ ದೇಶದಾದ್ಯಂತ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.
ಈ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯವಾಗಿ ಸುರಿಯಬೇಕಿದ್ದ 72.2 ಮಿ.ಮೀ. ಮಳೆಯ ಬದಲಾಗಿ ಕೇವಲ 42.6 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ.
ಹವಾಮಾನ ಇಲಾಖೆಯ ಪ್ರದೇಶವಾರು ಮಳೆ ವ್ಯತ್ಯಾಸ ನಕ್ಷೆಯ ಪ್ರಕಾರ, ಮಧ್ಯ ಭಾರತದಲ್ಲಿ ಶೇ.67, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.42, ದಕ್ಷಿಣ ಪರ್ಯಾಯ ದ್ವೀಪ ಪ್ರದೇಶದಲ್ಲಿ ಶೇ.22 ಹಾಗೂ ವಾಯವ್ಯ ಭಾರತದಲ್ಲಿ ಶೇ.6ರಷ್ಟು ಮಳೆ ಕೊರತೆ ಕಂಡುಬಂದಿದೆ.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಉಳಿದ ಭಾಗಗಳಿಗೆ ನೈಋತ್ಯ ಮುಂಗಾರು ಮುಂದುವರಿಯಲು ಸಾಧ್ಯವಾಗದಿರುವುದಕ್ಕೆ "ಅನುಕೂಲಕರವಾದ ದೊಡ್ಡ ಪ್ರಮಾಣದ ಹವಾಮಾನ ಪರಿಸ್ಥಿತಿಗಳ ಕೊರತೆ" ಪ್ರಮುಖ ಕಾರಣವಾಗಿದೆ ಎಂದು ಗುರುವಾರ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಉತ್ತರದತ್ತ ಸಾಗುವ ಪ್ರಕ್ರಿಯೆ ನಿಧಾನಗೊಳ್ಳಲು ಐದು ಪ್ರಮುಖ ಕಾರಣಗಳಿದ್ದು, ಮೊದಲನೆಯದಾಗಿ, ಪ್ರಸ್ತುತ ಮುಂಗಾರು ಪ್ರವಾಹಕ್ಕೆ ಅರಬ್ಬೀ ಸಮುದ್ರದಿಂದ ಬಲವಾದ ತೇವಾಂಶಭರಿತ ಗಾಳಿಯ ಅಲೆ (ಸರ್ಜ್) ಲಭ್ಯವಾಗುತ್ತಿಲ್ಲ ಎಂದು ಐಎಂಡಿ ತಿಳಿಸಿದೆ.
"ಇಂತಹ ಬಲವಾದ ಗಾಳಿಯ ಅಲೆಗಳು ಸಾಮಾನ್ಯವಾಗಿ ಹೆಚ್ಚಿನ ತೇವಾಂಶವನ್ನು ಒಳನಾಡಿನತ್ತ ತಂದು, ವ್ಯಾಪಕ ಮಳೆಯಾಗಲು ಕಾರಣವಾಗುತ್ತವೆ. ಇದರಿಂದ ಮುಂಗಾರು ಮತ್ತಷ್ಟು ಪ್ರದೇಶಗಳಿಗೆ ಮುನ್ನಡೆಯಲು ಸಹಕಾರಿಯಾಗುತ್ತದೆ" ಎಂದು ಹವಾಮಾನ ಇಲಾಖೆ ಹೇಳಿದೆ.
Advertisement