

ಕೋಲ್ಕತ್ತಾ: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರ ಸ್ಪರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಪಕ್ಷಕ್ಕೆ ಮತ್ತೊಂದು ಹೊಡೆತ ನೀಡಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ, ಹಾಗೂ ಮಾಜಿ ಖಜಾಂಚಿ ಅರೂಪ್ ಬಿಸ್ವಾಸ್ ಅವರು HDFC ಬ್ಯಾಂಕ್ಗೆ ಪತ್ರ ಬರೆದು, ಪಕ್ಷದ ಖಾತೆಗಳನ್ನು ಫ್ರೀಜ್ ಮಾಡುವಂತೆ ಮನವಿ ಮಾಡಿದ್ದಾರೆ.
ಬ್ಯಾಂಕ್ಗೆ ಬರೆದ ಪತ್ರದಲ್ಲಿ, ಬಂಡಾಯ ಬಣ, ತಾವೇ ಪಕ್ಷದ ಕಾನೂನುಬದ್ಧ ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಎಂದು ಪ್ರತಿಪಾದಿಸುತ್ತಿದ್ದು, ಟಿಎಂಸಿ ಹೆಸರಿನಲ್ಲಿರುವ ಖಾತೆಗಳನ್ನು ನಿರ್ವಹಿಸಲು ನಿಜಕ್ಕೂ ಯಾರಿಗೆ ಅಧಿಕಾರವಿದೆ ಎಂಬುದರ ಕುರಿತು ಅನಿಶ್ಚಿತತೆ ಉಂಟಾಗಿದೆ ಎಂದು ಬಿಸ್ವಾಸ್ ಹೇಳಿದ್ದಾರೆ.
ಪಕ್ಷವು ತೀವ್ರ ಬಂಡಾಯವನ್ನು ಎದುರಿಸುತ್ತಿರುವಾಗ ಭಿನ್ನಮತೀಯರು ಪಕ್ಷದ ಬಹುಕೋಟಿ ಹಣವನ್ನು ಲೂಟಿ ಮಾಡಬಹುದು ಅಥವಾ ಬೇರೆಡೆಗೆ ವರ್ಗಾಯಿಸಬಹುದು ಎಂಬ ಭೀತಿಯಿಂದ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೋಲ್ಕತ್ತಾದ ಎಚ್ಡಿಎಫ್ಸಿ ಬ್ಯಾಂಕ್ಗೆ ಬಿಸ್ವಾಸ್ ಪತ್ರ ಬರೆದಿದ್ದಾರೆ.
ಟಿಎಂಸಿ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಎಂದು ಪರಿಗಣಿಸಲ್ಪಟ್ಟ ಬಿಸ್ವಾಸ್, ವಿಧಾನಸಭಾ ಚುನಾವಣೆಯವರೆಗೆ ಪಕ್ಷದ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಚುನಾವಣೆಯಲ್ಲಿ ಅವರು ಟೋಲಿಗುಂಜ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು. ಪಕ್ಷದ ಸೋಲಿನ ನಂತರ, ಟಿಎಂಸಿ, ಬಿಸ್ವಾಸ್ ಬದಲಿಗೆ ಮಾಜಿ ರಾಜ್ಯಸಭಾ ಸಂಸದ ಸುಭಾಷಿಶ್ ಚಕ್ರವರ್ತಿ ಅವರನ್ನು ಖಜಾಂಚಿಯಾಗಿ ನೇಮಕ ಮಾಡಿದೆ.
ಅನಧಿಕೃತ ವ್ಯಕ್ತಿಗಳು, ಸಹಿ ಮಾಡಿದ ಚೆಕ್ಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಬಿಸ್ವಾಸ್ ಬ್ಯಾಂಕಿಗೆ ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ನಾಯಕತ್ವ ವಿವಾದ ಬಗೆಹರಿಯುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರಿದ್ದಾರೆ.
ಯಾವುದೇ ರೀತಿಯ ಹಣ ವರ್ಗಾವಣೆ, ಡೆಬಿಟ್ ವಹಿವಾಟುಗಳು ಅಥವಾ ಖಾತೆಯ ಕಾರ್ಯಾಚರಣೆಯ ಆದೇಶಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶ ನೀಡಬಾರದು ಎಂದು ಬಿಸ್ವಾಸ್ ಅವರು ಒತ್ತಾಯಿಸಿದ್ದಾರೆ.
ಬ್ಯಾಂಕ್ಗೆ ಸಲ್ಲಿಕೆಯಾಗಿರುವ ಪತ್ರದ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ಮೂಲ ನಾಯಕತ್ವವು ತನ್ನ ಜನಪ್ರತಿನಿಧಿಗಳ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಪಕ್ಷದ ಒಟ್ಟು 28 ಸಂಸದರಲ್ಲಿ ಕೇವಲ 8 ಸಂಸದರು ಮಾತ್ರ ಸದ್ಯ ನಾಯಕತ್ವದ ಜತೆಗಿದ್ದಾರೆ, ಉಳಿದ 20 ಸಂಸದರು ಬಂಡಾಯ ಬಣ ಸೇರಿದ್ದಾರೆ. ಪಕ್ಷದ ಒಟ್ಟು 60 ಶಾಸಕರಲ್ಲಿ ಕೇವಲ ಇಬ್ಬರು ಮಾತ್ರ ಮಮತಾ ಬಣದಲ್ಲಿದ್ದು, ಉಳಿದ 58 ಶಾಸಕರು ಬಂಡಾಯವೆದ್ದಿದ್ದಾರೆ.
Advertisement