

ಕರ್ನೂಲ್: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಬುಧವಾರ ಕರ್ನೂಲ್ ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿಯಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು.
ಈ ಖಾಸಗಿ ಚಿನ್ನದ ಗಣಿಗಾರಿಕೆಯನ್ನು ಜಿಯೋ ಮೈಸೂರು ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಬರೋಬ್ಬರಿ 405 ಕೋಟಿ ರೂ. ಹೂಡಿಕೆಯೊಂದಿಗೆ ಆರಂಭಿಸುತ್ತಿವೆ.
ಸ್ವಾತಂತ್ರ್ಯದ ನಂತರ ಭಾರತದ ಏಕೈಕ ಖಾಸಗಿ ವಲಯದ ಪ್ರಾಥಮಿಕ ಚಿನ್ನದ ಗಣಿ(Gold Mine) ಎಂದು ಕರೆಯಲ್ಪಡುವ ಈ ಉದ್ಯಮವು ದೇಶದ ಗಣಿಗಾರಿಕೆ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತಿದ್ದು, ಇದು ರಾಜ್ಯದಲ್ಲಿ ವಾಣಿಜ್ಯಿಕವಾಗಿ ಚಿನ್ನದ ಉತ್ಪಾದನೆಗೆ ನಾಂದಿ ಹಾಡಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಚಿವರಾದ ಕೊಲ್ಲು ರವೀಂದ್ರ, ನಿಮ್ಮಲ ರಾಮನಾಯ್ಡು ಮತ್ತು ಟಿಜಿ ಭಾರತ್ ಅವರೊಂದಿಗೆ ಇಂದು ಎರಡನೇ ಘಟಕಕ್ಕೆ ಅಡಿಪಾಯ ಹಾಕುವ ಮೂಲಕ ಮೊದಲ ಘಟಕಕ್ಕೆ ಚಾಲನೆ ನೀಡಿದರು.
ಈ ಯೋಜನೆಯು ಮೊದಲ ಹಂತದಲ್ಲಿ 600 ಎಕರೆಗಳನ್ನು ಒಳಗೊಂಡಿದೆ. ಅಂತಿಮವಾಗಿ ರಾಜ್ಯ ಸರ್ಕಾರವು ಹಂಚಿಕೆ ಮಾಡಿದ 1,500 ಎಕರೆಗಳಲ್ಲಿ ಗಣಿ ಕಾರ್ಯಾಚರಣೆಗಳು ವಿಸ್ತರಿಸುತ್ತವೆ.
ಈ ಘಟಕವು ತನ್ನ ಮೊದಲ ವರ್ಷದ ಕಾರ್ಯಾಚರಣೆಯಲ್ಲಿ 400 ಕೆಜಿಯಷ್ಟು ಚಿನ್ನವನ್ನು ಉತ್ಪಾದಿಸುವ ನಿರೀಕ್ಷೆ ಇದ್ದು, ಎರಡನೇ ವರ್ಷದಿಂದ ವಾರ್ಷಿಕ ಉತ್ಪಾದನೆಯು 900 ಕೆಜಿಗೆ ಹೆಚ್ಚಾಗುವ ನಿರೀಕ್ಷೆಯಿದೆ.