

ನವದೆಹಲಿ: ಕರಾಚಿಯಲ್ಲಿರುವ ಸೇನಾ ನೆಲೆ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಅರೆಸೇನಾ ಪಡೆ ಸಿಬ್ಬಂದಿ ಮೃತಪಟ್ಟ ಘಟನೆಯಲ್ಲಿ ಭಾರತ ಸಂಬಂಧ ಹೊಂದಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿಹಾಕಿದೆ. ಇತರರತ್ತ ಬೆರಳು ತೋರಿಸುವ ಬದಲು ತನ್ನ ನೆಲದಲ್ಲಿರುವ ಉಗ್ರಗಾಮಿ ಜಾಲ ವಿರುದ್ಧ ವಿಶ್ವಾಸಾರ್ಹ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ಕಿವಿಮಾತು ಹೇಳಿದೆ.
ಇಸ್ಲಾಮಾಬಾದ್ನ ವರದಿಗಳ ಪ್ರಕಾರ, ನಿನ್ನೆ ಶನಿವಾರ ರಾತ್ರಿ ಕರಾಚಿಯಲ್ಲಿರುವ ಸಿಂಧ್ ರೇಂಜರ್ಸ್ ಪಡೆಯ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಪಾಕಿಸ್ತಾನದ ಭದ್ರತಾ ಪಡೆಗಳು ವಿಫಲಗೊಳಿಸಿವೆ. ಈ ಕಾರ್ಯಾಚರಣೆಯಲ್ಲಿ ಆರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಮತ್ತೊಬ್ಬನನ್ನು ಬಂಧಿಸಲಾಗಿದೆ.
ಈ ದಾಳಿಯಲ್ಲಿ ನಾಲ್ವರು ಅರೆಸೇನಾ ಪಡೆ ಸಿಬ್ಬಂದಿ ಮೃತಪಟ್ಟಿದ್ದು, 2024ರ ಅಕ್ಟೋಬರ್ ಬಳಿಕ ಕರಾಚಿಯಲ್ಲಿ ನಡೆದ ಮೊದಲ ಪ್ರಮುಖ ಉಗ್ರ ದಾಳಿ ಇದಾಗಿದೆ.
ಈ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಆಡಳಿತ ವ್ಯವಸ್ಥೆಯ ಕೆಲ ವಲಯಗಳು ಆರೋಪಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಕರಾಚಿಯ ಇತ್ತೀಚಿನ ಘಟನೆಯ ಕುರಿತು ಭಾರತ ವಿರುದ್ಧ ಪಾಕಿಸ್ತಾನದ ಮಾಧ್ಯಮಗಳಲ್ಲಿ ಆಧಾರರಹಿತ ಆರೋಪಗಳು ಪ್ರಕಟವಾಗಿರುವುದನ್ನು ನಾವು ಗಮನಿಸಿದ್ದೇವೆ. ಈ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಖಂಡಿಸಿದ್ದಾರೆ.
ಇತರರತ್ತ ಬೆರಳು ತೋರಿಸುವ ಬದಲು, ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಳ್ಳಬೇಕು. ತನ್ನ ನೆಲದಲ್ಲಿರುವ ಉಗ್ರಗಾಮಿ ಮೂಲಸೌಕರ್ಯಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ಕೈಗೊಂಡು, ಉಗ್ರವಾದವನ್ನು ರಾಜ್ಯ ನೀತಿಯ ಸಾಧನವಾಗಿ ಬಳಸುವ ಪ್ರವೃತ್ತಿಯಿಂದ ಹೊರಬರಬೇಕು ಎಂದು ಅವರು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.
ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಯಾವುದೇ ಪುರಾವೆ ನೀಡದೆ ಈ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.