

ಇಟಾ ನಗರ: ಈಶಾನ್ಯ ಭಾರತದಲ್ಲಿ ಭಾರಿ ಮಳೆ ಮುಂದುವರೆದಿರುವಂತೆಯೇ ಭೂ ಕುಸಿತ ಪ್ರಕರಣಗಳೂ ಕೂಡ ವರದಿಯಾಗುತ್ತಿದ್ದು, ಒಂದೀಡೀ ಗುಡ್ಡ ಕುಸಿತವಾಗಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ ಸಿಜಿ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೀಕರ ಗುಡ್ಡ ಕುಸಿದಿದ್ದು, ಪರಿಣಾಮ ಬೈಕ್ ಸವಾರನೊಬ್ಬ ಮಣ್ಣು, ಕಲ್ಲು ಹಾಗೂ ಅವಶೇಷಗಳೊಂದಿಗೆ ಕೆಳಕ್ಕೆ ಕೊಚ್ಚಿಹೋಗಿರುವ ಭಯಾನಕ ಘಟನೆ ನಡೆದಿದೆ.
ನಿನ್ನೆ ಅಂದರೆ ಜೂನ್ 28ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೈಕ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಬೈಕ್ ಸವಾರ ಮಳೆಯಿಂದ ಕೆಸರುಮಯವಾಗಿದ್ದ ಬೆಟ್ಟದ ಇಳಿಜಾರಿನ ಕಿರಿದಾದ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಾಗುತ್ತಿರುವುದು ಕಾಣಿಸುತ್ತದೆ.
ಅಷ್ಟರಲ್ಲೇ ಏಕಾಏಕಿ ರಸ್ತೆಯ ಒಂದು ಭಾಗ ಕುಸಿದು, ಮಣ್ಣು, ಕಲ್ಲು ಮತ್ತು ಅವಶೇಷಗಳು ಭಾರೀ ವೇಗದಲ್ಲಿ ಕೆಳಕ್ಕೆ ಜಾರುತ್ತವೆ. ಕೆಲವೇ ಕ್ಷಣಗಳಲ್ಲಿ ಬೈಕ್ ಹಾಗೂ ಸವಾರ ಇಬ್ಬರೂ ಬೆಟ್ಟದ ಇಳಿಜಾರಿನಲ್ಲಿ ಕೊಚ್ಚಿಹೋಗುತ್ತಾರೆ.
ನದಿ ನೀರಿಗೂ ತಡೆ
ಭೂಕುಸಿತದಿಂದ ಸಿಜಿ ನದಿಯ ಹರಿವಿಗೂ ತಾತ್ಕಾಲಿಕ ಅಡ್ಡಿಯಾಗಿದ್ದು, ಮಣ್ಣು ಮತ್ತು ಕಲ್ಲುಗಳಿಂದ ನದಿಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣವಾಗಿದೆ. ಇದರಿಂದ ಪ್ರವಾಹ ಉಂಟಾಗುವ ಸಾಧ್ಯತೆ ಹಾಗೂ ಮತ್ತಷ್ಟು ಭೂಕುಸಿತದ ಆತಂಕ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರದೇಶದ ಮೇಲೆ ನಿಗಾ ವಹಿಸಿದ್ದಾರೆ.
ಬದುಕುಳಿದಿದ್ದೇ ಪವಾಡ
ಗುಡ್ಡದ ಮಣ್ಣಿನ ಜೊತೆ ಕೊಚ್ಚಿ ಹೋದ ಬೈಕ್ ಸವಾರ ಬಳಿಕ ಬೈಕ್ ಬಿಟ್ಟು ಜೀವ ಉಳಿಸಿಕೊಳ್ಳಲು ಓಡಿ ಹೋದ ಘಟನೆ ನಡೆದಿದೆ. ಅದೃಷ್ಟವಶಾತ್ ಆತನಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು "ಪವಾಡಸದೃಶ ಪಾರು" ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಒಂದು ಕ್ಷಣದ ವ್ಯತ್ಯಾಸವಾಗಿದ್ದರೆ ಎಲ್ಲವೂ ಮುಗಿದೇ ಹೋಗುತ್ತಿತ್ತು. ಅವರು ಸುರಕ್ಷಿತವಾಗಿ ಬದುಕುಳಿದಿರುವುದು ಸಂತಸದ ವಿಚಾರ," ಎಂದು ಒಬ್ಬರು ಬರೆದಿದ್ದಾರೆ.
ಈ ಮುಂಗಾರು ಅವಧಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಹಠಾತ್ ಪ್ರವಾಹ ಪ್ರಕರಣಗಳು ಹೆಚ್ಚುತ್ತಿವೆ. ಅಪಾಯದ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸುವಂತೆ ಹಾಗೂ ಬೆಟ್ಟ ಪ್ರದೇಶಗಳ ರಸ್ತೆಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ನಿರಂತರವಾಗಿ ಮನವಿ ಮಾಡುತ್ತಿದ್ದಾರೆ.