

ಅಯೋಧ್ಯೆ: ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ ಕುರಿತು ತನಿಖೆ ಮುಂದುವರೆಸಿರುವ ಅಯೋಧ್ಯೆ ಪೊಲೀಸರು ಸೋಮವಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂಪತ್ ರಾಯ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಂತೆ, ಅನಿಲ್ ಮಿಶ್ರಾ ಸೇರಿದಂತೆ ಇತರ ಹಿರಿಯ ಟ್ರಸ್ಟ್ ಪದಾಧಿಕಾರಿಗಳ ಹೇಳಿಕೆಗಳನ್ನು ನಂತರ ದಾಖಲಿಸಲಾಗುವುದು ಎಂದು ಮೂಲಗಳು ಬಹಿರಂಗಪಡಿಸಿವೆ.
ಆರೋಪಿಗಳಲ್ಲಿ ಒಬ್ಬರಾದ ಅವಿನಾಶ್ ಶುಕ್ಲಾ ಅವರ ಅಯೋಧ್ಯೆಯಲ್ಲಿರುವ ನಿವಾಸದ ಮೇಲೆ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿ, ಹಲವು ಮಹತ್ವದ ಮಾಹಿತಿ ಕಲೆಹಾಕಿದ್ದರು. ಈ ಬೆಳವಣಿಗೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿಯ ಸಹೋದರ ಅಭಿಷೇಕ್ ಶುಕ್ಲಾ, ದೇವಾಲಯದ ನಿಧಿಯ ದುರುಪಯೋಗದಲ್ಲಿ ಭಾಗಿಯಾಗಿರುವ ಯಾರನ್ನೂ ಕುಟುಂಬ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಮ ಮಂದಿರ ಕುರಿತು ಕಳೆದ ಕೆಲವು ದಿನಗಳಿಂದ ವರದಿಯಾದ ಘಟನೆಗಳಿಂದ ನಮಗೆ ಆಘಾತ, ನೋವು ಮತ್ತು ತೀವ್ರ ದುಃಖವಾಗಿದೆ. ನ್ಯಾಯಯುತ ತನಿಖೆಗಾಗಿ ಮತ್ತು ಭಕ್ತರಿಗೆ ಧೈರ್ಯ ತುಂಬಲು ನಾವು ಬದ್ಧರಾಗಿದ್ದೇವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (ಟ್ರಸ್ಟ್) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (ಟ್ರಸ್ಟ್) ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಸ್ವೀಕರಿಸಿರುವುದಾಗಿ ಟ್ರಸ್ಟ್ ಘೋಷಿಸಿದೆ.