

ಪುಣೆ: ಮೂರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಲ್ಲಿ 65 ವರ್ಷದ ವ್ಯಕ್ತಿಯನ್ನು ತಪ್ಪಿತಸ್ಥನೆಂದು ಪುಣೆಯ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದ್ದು, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಅಪರಾಧ ನಡೆದ ಎರಡು ತಿಂಗಳಲ್ಲಿಯೇ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಭೀಮರಾವ್ ಕಾಂಬ್ಳೆ ಎಂಬ ವೃದ್ಧ ಮಾಡಿದ ಅನಾಗರಿಕ, ಪೈಶಾಚಿಕ ಅಪರಾಧದ ಬಗ್ಗೆ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಆರೋಪಿಗೆ ಮರಣದಂಡನೆ ತೀರ್ಪು ಪ್ರಕಟಿಸಿದೆ ಎಂದು ಮೂಲಗಳು ಹೇಳಿವೆ. ತೀರ್ಪು ಪ್ರಕಟ ನಂತರ ಮಾತನಾಡಿದ ಸಂತ್ರಸ್ತೆಯ ಪೋಷಕರು, ಆರೋಪಿಗೂ ತಮ್ಮ ಮಗಳಿಗಾದ ಶಿಕ್ಷೆ ನೀಡಬೇಕು ಎಂದು ಗೋಳಾಡಿದ್ದಾರೆ.
ಜೂನ್ 25 ರಂದು ನ್ಯಾಯಾಲಯ ಆರೋಪಿ ವಿರುದ್ಧದ ಎಲ್ಲಾ ಆರೋಪಗಳು ನಿಜವೆಂದು ಹೇಳಿತ್ತು. ಪ್ರಾಸಿಕ್ಯೂಷನ್ ಮತ್ತು ದೂರುದಾರರ ವಾದಗಳನ್ನು ಆಲಿಸಿದ ನಂತರ ಇಂದಿಗೆ ಶಿಕ್ಷೆಯ ತೀರ್ಪನ್ನು ಕಾಯ್ದಿರಿಸಿತು. ಇಂದು ಆರೋಪಿಗೆ ಮರಣ ದಂಡನೆ ಶಿಕ್ಷೆಯ ತೀರ್ಪು ಪ್ರಕಟಿಸಿದೆ.
ವಿಶೇಷ ಸಾರ್ವಜನಿಕ ಅಭಿಯೋಜಕ ಅಜಯ್ ಮಿಸಾರ್, ವಿಚಾರಣೆ ವೇಳೆ ಅಪರಾಧದ ಗಂಭೀರತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಗರಿಷ್ಠ ಶಿಕ್ಷೆಯ ಬೇಡಿಕೆಗೆ ಪೂರಕವಾಗಿ ಸುಪ್ರೀಂ ಕೋರ್ಟ್ನ 12 ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿದ್ದರು. ಆರೋಪಿಯ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ಪ್ರಾಸಿಕ್ಯೂಷನ್ ತೀರ್ಮಾನಿಸಿತು. ಐಪಿಸಿಯ ಎಲ್ಲಾ ವಿಭಾಗಗಳ ಅಡಿಯಲ್ಲಿ ತಪ್ಪಿತಸ್ಥನೆಂದು ಘೋಷಿಸಿತು ಎಂದು ಮಿಸಾರ್ ಹೇಳಿದರು.
ಪೊಲೀಸರು ಸಂಪೂರ್ಣ ಸಾಕ್ಷ್ಯಗಳನ್ನು ಒಳಗೊಂಡ 1,200 ಪುಟಗಳ ಚಾರ್ಜ್ಶೀಟ್ ಅನ್ನು ಸಲ್ಲಿಸಿದ್ದಾರೆ ಎಂದು ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದರು.
ಮೂರೂವರೆ ವರ್ಷದ ಬಾಲಕಿ ಚಿತ್ರಹಿಂಸೆ ತಾಳಲಾರದೆ ಸಾವನ್ನಪ್ಪಿದ್ದಾಳೆ ಮತ್ತು ಆಕೆಯ ಸಾವಿನ ನಂತರವೂ ಆಕೆಯ ಮೇಲೆ ಆರೋಪಿ ಹಲ್ಲೆ ಮುಂದುವರಿಸಿದ್ದಾರೆ. ಲ್ಲಾ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿವೆ. 15 ದಿನಗಳಲ್ಲಿ ತ್ವರಿತಗತಿಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುತ್ತೇವೆ ಮತ್ತು ಗುಣಮಟ್ಟದ ತನಿಖೆ ನಡೆಸುತ್ತೇವೆ ಎಂದು ನಾವು ಜನರಿಗೆ ಭರವಸೆ ನೀಡಿದ್ದೆವು. ಅದೇ ರೀತಿ ಸಲ್ಲಿಸಿದ್ದೇವೆ ಎಂದು ಗಿಲ್ ಮಾಹಿತಿ ನೀಡಿದ್ದಾರೆ.